ಮಹಿಳಾ ಪೇದೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕೆಎಸ್ಆರ್ಪಿ ವಸತಿ ಗೃಹದಲ್ಲಿ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಪೇದೆಯನ್ನು 32 ವರ್ಷದ ಗೀತಾ ಎಂದು ಗುರುತಿಸಲಾಗಿದೆ. ಗೀತಾ, ನಜರಬಾದ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಫೆಬ್ರವರಿ 21ರಂದು ಗೀತಾ ಅನಾರೋಗ್ಯದ ಕಾರಣವನ್ನು ನೀಡಿ ಪೋಲೀಸ್ ಠಾಣೆಯಿಂದ ಮನೆಗೆ ಬಂದಿದ್ದರು ಎಂದು ಹೇಳಲಾಗಿದೆ.
ಮನೆಯಲ್ಲಿದ್ದ ಪತಿಯನ್ನು, ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ಬರಲು ಕಳುಹಿಸಿದ್ದಾರೆ. ಪತಿ ಹೋದ ನಂತರ ಮನೆಯಲ್ಲಿ ಒಬ್ಬರೇ ಇದ್ದರು. ಎಟಿಎಂಗೆ ಹೋದ ಪತಿ, ಪತ್ನಿ ಗೀತಾಗೆ ಕರೆ ಮಾಡಿದಾಗ ಗೀತಾ ಉತ್ತರಿಸಿಲ್ಲ ಎಂದು ಹೇಳಲಾಗಿದೆ.
ಬಳಿಕ ಮನೆಗೆ ವಾಪಸ್ಸು ಬಂದು ನೋಡಿದಾಗ ಗೀತಾ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


