ಹೊಡಿ, ಬಡಿ, ಕಡಿ ಅನ್ನೋದು ಬಿಜೆಪಿ ಸಂಸ್ಕೃತಿಯಾಗಿದೆ ಎಂದು ಹೇಳುವ ಮೂಲಕ ಸಚಿವ ಅಶ್ವಥ್ ನಾರಾಯಣ ಅವರ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಅಶ್ವಥ್ ನಾರಾಯಣ ಟಿಪ್ಪುವನ್ನು ಹೊಡೆದಂತೆ ಸಿದ್ದರಾಮಯ್ಯರನ್ನು ಹೊಡೆದಾಕಬೇಕು ಎಂಬ ಹೇಳಿಕೆ ಪ್ರತಿಕ್ರಿಯಿಸಿದ್ದಾರೆ.
ಮಹಾತ್ಮಾ ಗಾಂಧೀಜಿಯಂರವರನ್ನೇ ಕೊಂದವರು ಬಿಜೆಪಿಯವರು. ರಾಜ್ಯದಲ್ಲಿ ಚರ್ಚೆಯಾಗಬೇಕಿರುವುದು ಅಭಿವೃದ್ದಿ ವಿಚಾರ, ಅದರಲ್ಲೂ ರೈತರ, ಬಡವರ ದಲಿತರು ಅಲ್ಪಸಂಖ್ಯಾತರ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕು. ಆದರೆ ಇದೂ ಬಿಜೆಪಿವರಿಗೆ ಬೇಡವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ಬೇಕಿದ್ದರೆ ಬರೆದುಕೊಳ್ಳಲಿ ಈ ಚುನಾವಣೆ ಟಿಪ್ಪು ವರ್ಸಸ್ ಸಾವರ್ಕರ್ ನಡುವೆ ನಡೆಯಲಿ, ಇದನ್ನು ಜನ ತೀರ್ಮಾನ ಮಾಡಲಿ. ಜನ ಇಂತಹದಕ್ಕೆಲ್ಲ ಪ್ರೋತ್ಸಾಹ ಕೊಡೋಕೆ ಆಗುತ್ತಾ..? ಎಂದು ಪ್ರಶ್ನಿಸಿದರು.
ಒಬ್ಬ ಸಚಿವನಾಗಿ ಈ ರೀತಿ ಹೇಳಿಕೆ ಕೊಡೋದು ಎಷ್ಟರ ಮಟ್ಟಿಗೆ ಸರಿ. ಪ್ರಜೆಗಳಿಗೆ ರಕ್ಷಣೆ ಕೊಡೋದು ಸಚಿವರು ಹಾಗೂ ಸರ್ಕಾರದ ಜವಾಬ್ದಾರಿ ಎಂದರು.
ಟಿಪ್ಪುವನ್ನ ಮುಗಿಸಿದ ಹಾಗೆ ಸಿದ್ಧರಾಮಯ್ಯನವರನ್ನ ಮುಗಿಸಿ ಎಂದರೆ ಏನರ್ಥ. ಪೊಲೀಸರು ಇದನ್ನ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಚಿವ ಅಶ್ವಥ್ ನಾರಾಯಣ ಅವರ ಈ ಹೇಳಿಕೆ ಬಗ್ಗೆ ಪ್ರಧಾನಿ, ಅಮಿತ್ ಶಾ ಹೇಳುತ್ತಾರೆ ಹೇಳಿ, ಇದು ಸರೀನಾ ಅಂತಾ ಹೇಳಲಿ. ಸಿದ್ಧರಾಮಯ್ಯವರನ್ನ ರಕ್ಷಿಸಬೇಕಾದವರೇ ಮುಗಿಸಿ ಅಂತಾ ಕರೆ ಕೊಟ್ಟರೆ ಏನರ್ಥ ?. ನಾನು ದೂರು ಕೊಡೋಕೆ ಹೋಗಲ್ಲ ಎಂದು ಹೇಳಿದ್ದಾರೆ.


