ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕು ಅಂಕಸಂದ್ರದ ಅರಣ್ಯ ಪ್ರದೇಶದಲ್ಲಿ ಸತ್ತ ಸ್ಥಿತಿಯಲ್ಲಿ ಹುಲಿಯ ದೇಹ ಪತ್ರೆಯಾಗಿದ್ದು, ಯಾವ ಕಾರಣಕ್ಕೆ ಹುಲಿ ಸಾವನ್ನಪ್ಪಿದೆ ಎಂಬುದು ಮಾತ್ರ ಇದುವರೆಗೂ ಗೊತ್ತಾಗಿಲ್ಲ.
ತುಮಕೂರಿನ ದೇವರಾಯನ ದುರ್ಗದಲ್ಲಿ ಹುಲಿಯ ಓಡಾಟ ಕಂಡುಬಂದಿದ್ದು ಹುಲಿಯ ಹೆಜ್ಜೆಗುರುತುಗಳನ್ನು ಪತ್ತೆಹಚ್ಚಲಾಗಿತ್ತು. ಆದರೂ ದೇವರಾಯನದುರ್ಗದಲ್ಲಿ ಹುಲಿಯ ಓಡಾಟ ಇತ್ತ ಎಂಬುದು ಖಚಿತವಾಗಿರಲಿಲ್ಲ. ಈಗ ಸತ್ತ ಹುಲಿ ದೇಹ ಪತ್ತೆಯಾಗಿರುವುದು ದೇವರಾಯನ ದುರ್ಗದಲ್ಲಿ ಹುಲಿ ಇರುವುದಕ್ಕೆ ಪುಷ್ಠಿ ನೀಡಿದೆ.
ಅಂಕಸಂದ್ರದ ಅರಣ್ಯ ಪ್ರದೇಶದಲ್ಲಿರುವ ರಸ್ತೆಗೆ ನಿರ್ಮಿಸಲಾದ ಸೇತುವೆಯಡಿ ಹುಲಿಯ ಮೃತದೇಹ ಕಂಡುಬಂದಿರುವುದು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯ ಮತ್ತು ಕುತೂಹಲಕ್ಕೆ ಕಾರಣವಾಗಿದೆ.
ಹುಲಿ ಸತ್ತ ಸ್ಥಿತಿಯಲ್ಲಿ ಮಲಗಿದೆ. ಇದುವರೆಗೂ ಹುಲಿಯನ್ನು ಮುಟ್ಟುವ ಸಾಹಸಕ್ಕೆ ಯಾರೂ ಹೋಗಿಲ್ಲ. ಹುಲಿ ದೇಹ ಕಂಡು ಬಂದಿರುವ ಸೇತುವೆಯಿಂದ 100 ಮೀಟರ್ ಒಳಗೆ ಜನರು ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ. ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಟ್ಟುನಿಟ್ಟಿನ ನಿರ್ಬಂಧವನ್ನು ವಿಧಿಸಿದ್ದಾರೆ.
ಮೈಸೂರಿನಿಂದ ಹುಲಿ ತಜ್ಞರು ಬರುವವರೆಗೂ ಸತ್ತಂತಿರುವ ಹುಲಿಯ ಮೃತದೇಹವನ್ನು ಯಾರೂ ಮುಟ್ಟದೆ ಅಂತರವನ್ನು ಕಾಯ್ದುಕೊಳ್ಳಲಾಗಿದೆ.
ಪರಿಸರವಾದಿ ಗುಂಡಪ್ಪ ದಿ ನ್ಯೂಸ್ ಕಿಟ್.ಇನ್ ಜೊತೆ ಮಾತನಾಡಿ, ರಸ್ತೆಗೆ ನಿರ್ಮಾಣ ಮಾಡಿರುವ ಸೇತುವೆಯ ಕೆಳಗೆ ಕೊಳಾಯಿನಲ್ಲಿ ಮಲಗಿರುವ ಸ್ಥಿತಿಯಲ್ಲಿ ಹುಲಿ ಕಂಡು ಬಂದಿದೆ. ಹುಲಿ ಸಾವಿಗೆ ಖಚಿತ ಕಾರಣ ತಿಳಿದುಬಂದಿಲ್ಲ. ಯಾರಾದರು ಹುಲಿಯನ್ನು ಸಾಯಿಸಿ ಇಲ್ಲಿಗೆ ಹಾಕಿರಬಹುದು. ಆಹಾರದ ಕೊರತೆಯಿಂದ ಹುಲಿ ಮೃತಪಟ್ಟಿದೆಯೋ ಗೊತ್ತಿಲ್ಲ. ನಾನು ಅಲ್ಲಿಯೇ ಇದ್ದೇನೆ. ಮೈಸೂರಿನಿಂದ ತಜ್ಞರು ಬಂದ ನಂತರವೇ ಹುಲಿಯ ಸಾವಿಗೆ ಕಾರಣವೇನು ಎಂಬುದು ತಿಳಿಯಲಿದೆ ಎಂದರು.
ಗಂಡ ಹುಲಿಗಳು ಏಕಾಂಗಿಯಾಗಿ ತಿರುಗುತ್ತದೆ. ಸಂತಾನೋತ್ಪತ್ತಿ ಸಂದರ್ಭದಲ್ಲಿ ಗಂಡು ಹುಲಿಯೇ ಹೆಣ್ಣು ಹುಲಿ ಜೊತೆ ಓಡಾಡಿ ಎರಡು ಪರಸ್ಪರ ಕೂಡುತ್ತವೆ ಎಂದರು. ಈ ಹುಲಿಗೆ ನಾಲ್ಕು ವರ್ಷ ಇರಬಹುದು ಎಂದು ಹೇಳಿದರು.


