ತುಮಕೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ವಿಎಚ್.ಪಿ ಮತ್ತು ಬಜರಂಗದಳ ನಾಯಕ ಶರಣ್ ಪಂಪ್ ವೆಲ್ ಬಹಿರಂಗವಾಗಿಯೇ ಒಂದು ನಿರ್ದಿಷ್ಟ ಧಾರ್ಮಿಕ ಜನರನ್ನು ಕೊಲ್ಲುವುದಾಗಿ ನೀಡಿರುವ ಹೇಳಿಕೆ ಕಾನೂನು ಉಲ್ಲಂಘನೆಯಾಗಿದ್ದು, ಕೂಡಲೇ ಆತನನ್ನು ಬಂಧಿಸಬೇಕು ಎಂದು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಜಿಲ್ಲಾಧ್ಯಕ್ಷ ಜುದ್ದೀನ್ ಶರೀಪ್ ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿದ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್, ಜಮಾತೆ ಎ ಇಸ್ಲಾಮಿ ಹಿಂದ್ ಹಾಗೂ ಸ್ಯಾಲಿಡೇಟರಿ ಯೂತ್ ಮೂಮೆಂಟ್ ಸಂಘಟನೆಗಳ ಮುಖಂಡರು ಸಾರ್ವಜನಿಕವಾಗಿಯೇ ದ್ವೇಷ ಕಾರುವ ಪಂಪ್ ವೆಲ್ ರಂಥ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಬೇಕು ಎಂದು ಎಸ್.ಪಿ.ಗೆ ಮನವಿ ಮಾಡಿದರು.
ಶರಣ್ ಪಂಪ್ ವೆಲ್ ದ್ವೇಷದ ಭಾಷಣ ಮಾಡಿ ತುಮಕೂರಿನ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ಕೆಲಸ ಮಾಡಿದ್ದಾರೆ. ಈ ಘಟನೆ ಪೂರ್ವನಿಯೋಜಿತ ಘಟನೆಯಾಗಿದೆ ಮತ್ತು ಕ್ರಿಮಿನಲ್ ಪಿತೂರಿಯ ಮುಂದುವರಿಕೆಯಾಗಿ ಸಮಾಜದ ನಿರ್ದಿಷ್ಠ ಸಮುದಾಯದ ವರ್ಗದ ವಿರುದ್ಧ ಅಪರಾಧಗಳನ್ನು ಎಸಗಲು ರೂಪಿಸಲಾದ ಕಾರ್ಯಕ್ರಮವಾಗಿದೆ ಎಂದು ತಾಜುದ್ದೀನ್ ಆರೋಪಿಸಿದ್ದಾರೆ.
ಸಭೆಯ ಸಂಘಟಕರು ಈ ರೀತಿಯ ಅಕ್ರಮ ಸಭೆಗಳಲ್ಲಿ ಸಮಾಜದಲ್ಲಿ ಅಶಾಂತಿ ಮೂಡಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಐಪಿಸಿ ಸೆಕ್ಷನ್ 120ಬಿ, 149, 153ಎ, 506 ಸೆಕ್ಷನ್ ಅಡಿಯಲ್ಲಿ ಇದು ಶಿಕ್ಷಾರ್ಹ ಅಪರಾಧವಾಗಿದೆ. ಹೀಗಾಗಿ ಕಾರ್ಯಕ್ರಮ ಆಯೋಜಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಮ್ಮ ಹುಡುಗರು ಎಲ್ಲರ ಎದುರೇ ಶೌರ್ಯದಿಮದ ನುಗ್ಗಿ ಸೂರತ್ಕಲ್ ಜಂಕ್ಷನ್ ನಲ್ಲಿ ಮುಸ್ಲೀಂ ಯುವಕ ಶಾಜಿಲ್ ಅವರನ್ನು ಕೊಲೆ ಮಾಡಿದ್ದಾರೆ ಎಂದು ಕೊಲೆಯನ್ನು ಬಹಿರಂಗವಾಗಿ ಸಮರ್ಥಿಸಿದ್ದು, ಮುಂದೆಯೂ ಇಂತಹ ದಾಳಿಗಳು ನಡೆಯಲಿವೆ ಎಂಬ ಬೆದರಿಕೆಯನ್ನು ಪಂಪ್ ವೆಲ್ ಹಾಕಿದ್ದಾರೆ. ಗುಜರಾತ್ ಗಲಭೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ ಪಂಪ್ ವೆಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಬೇಕು ಎಂದು ಒತ್ತಾಯಿಸಿದ್ದಾರೆ.


