ತುಮಕೂರು ಜಿಲ್ಲೆಯ ಆಮ್ ಆದ್ಮಿ ಪಕ್ಷದ ನೂತನ ಜಿಲ್ಲಾಧ್ಯಕ್ಷರನ್ನಾಗಿ ಅಂಕಸಂದ್ರ ಪ್ರೇಮಕುಮಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪಕ್ಷದ ಪದಾಧಿಕಾರಿಗಳ ಪುನರ್ ರಚನೆಯಾಗಿದ್ದು, ಈವರೆಗೆ ಜಿಲ್ಲಾ ಅಧ್ಯಕ್ಷರಾಗಿದ್ದ ಡಾ.ವಿಶ್ವನಾಥ್ ಅವರನ್ನು ರಾಜ್ಯ ಘಟಕದ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಸಮಿತಿ ಹಿರಿಯ ಸದಸ್ಯರಾಗಿದ್ದ ಗುಬ್ಬಿ ತಾಲ್ಲೂಕಿನ ಅಂಕಸಂದ್ರ ಪ್ರೇಮಕುಮಾರ್ ಅವರನ್ನು ತುಮಕೂರು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ವೃತ್ತಿಯಿಂದ ಸಿವಿಲ್ ಎಂಜಿನಿಯರ್ ಆಗಿರುವ ಪ್ರೇಮಕುಮಾರ್ ಆಮ್ ಆದ್ಮಿ ಪಕ್ಷದ ಹುಟ್ಟು ಬೆಳವಣಿಗೆಯಿಂದ ಜೊತೆಯಲ್ಲಿದ್ದು, ಜಿಲ್ಲಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ತುಮಕೂರಿನ ಡಾ.ನಿಜಾಮುದ್ದೀನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ತಿಪಟೂರು ಚಿಕ್ಕಸ್ವಾಮಿ ಗೌಡ ಹಾಗೂ ಕುಣಿಗಲ್ ತಾಲ್ಲೂಕಿನ ವಕೀಲ ವೃತ್ತಿಯ ಲೋಕೇಶ್ ಎಂ.ವೈ. ಅವರನ್ನು ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ.
ಸಾಮಾಜಿಕ ಜಾಲತಾಣಗಳ ಜಿಲ್ಲಾ ಮುಖ್ಯಸ್ಥರನ್ನಾಗಿ ಪಾವಗಡ ಮೂಲದ ರಾಮು.ಜಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸೈಯದ್ ರುಕ್ಷೀನಾ ಭಾನು, ಜಿಲ್ಲಾ ಮಾಧ್ಯಮ ಸಂಯೋಜಕರಾಗಿ ಗೋಮಾರದನಹಳ್ಳಿ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿಯಾಗಿ ಎಂ.ಎಸ್.ಮಧುಸೂಧನ್ ನೇಮಕ ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.