ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲದಂತೆ ನೋಡಿಕೊಳ್ಳಲು ತೆಲಂಗಾಣ ಮುಖ್ಯಮಂತ್ರಿ 500 ಕೋಟಿ ಆಫರ್ ನೀಡಿದ್ದಾರೆಂಬ ಆರೋಪವನ್ನು ಕಾಂಗ್ರೆಸ್ ಮುಖಂಡ ಜಮೀರ್ ಅಹಮದ್ ತಳ್ಳಿಹಾಕಿದ್ದಾರೆ. ನನಗೆ ಯಾವ ಆಫರ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಜಮೀರ್ ಅಹಮದ್, ನಾನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವನ್ನು ಭೇಟಿ ಮಾಡಿದ್ದು ನಿಜ. ನಮ್ಮ ಭೇಟಿಯಲ್ಲಿ ರಾಜಕೀಯ ವಿಷಯವೇ ಚರ್ಚೆಗೆ ಬಂದಿಲ್ಲ. 500 ಕೋಟಿ ಆಫರ್ ಬಗ್ಗೆಯೂ ಗೊತ್ತಿಲ್ಲ ಎಂದು ಹೇಳಿದ್ದಾರೆ.
ತಾಂಡೂರು ಶಾಸಕ ರೋಹಿತ್ ರೆಡ್ಡಿ ನನ್ನ ಸ್ನೇಹಿತರು. ಅವರು ಚಂದ್ರಶೇಖರ್ ಭೇಟಿ ಮಾಡಿ ಎಂದು ಕೇಳಿಕೊಂಡರು. ಹಾಗಾಗಿ ಭೇಟಿ ಮಾಡಿದೆ. ಅವರು ಬೇರೆ ಪಕ್ಷದವರು, ನಾವೇ ಬೇರೆ ಪಕ್ಷ, ಈ ಊಹಾಪೋಹಗಳಿಗೆ ಯಾವುದೇ ಸಂಬಂಧವೇ ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲದಂತೆ ನೋಡಿಕೊಳ್ಳಲು 500 ಕೋಟಿ ರೂಪಾಯಿಗಳ ಆಫರ್ ಬಗ್ಗೆಯೂ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಸೋಲಿಸಲು ಯಾರು ಸುಫಾರಿ ಕೊಟ್ಟಿದ್ದಾರೆ?. ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರು ಇರಿಸುವುದರಿಂದ ಅವರಿಗೆ ಏನು ಸಿಗುತ್ತದೆ ಎಂದು ಪ್ರಶ್ನಿಸಿದರು.


