ಹನ್ನೆರಡನೇ ಶತಮಾನದ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಚಿಂತನೆ ಕನ್ನಡ ನಾಡಿನಲ್ಲಿ ಹರಿಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನ ವಿಧಾನಸಧದ ಮುಂಭಾಗದಲ್ಲಿ ಜಗಜ್ಯೋತಿ ಬಸವೇಶ್ವರ ಮತ್ತು ನಾಡಪ್ರಭು ಕೆಂಪೇಗೌಡರ ಪುತ್ಥಳಿ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಕಾರ್ಯವನ್ನು ನೆರವೇರಿಸಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಈ ಇಬ್ಬರೂ ಮಹಾನ್ ಪುರುಷರ ಆಡಳಿತ ಮತ್ತು ಆಧ್ಯಾತ್ಮಿಕ ಚಿಂತನೆ ನಮ್ಮ ನಾಡಿನಲ್ಲಿ ಬರಬೇಕು. ಈ ಶಕ್ತಿ ಸೌಧದಿಂದ ಅದು ಹರಿಯಬೇಕು. ಆ ವಿಚಾರಗಳು ಹರಿದು ಕರ್ನಾಟಕ ಸಮಗ್ರವಾಗಿ ಅಭಿವೃದ್ಧಿಯಾಗಿರುವ, ಸಾಮರಸ್ಯವಿರುವ, ಭಾರತದಲ್ಲಿಯೇ ಅತ್ಯಂತ ಶ್ರೇಷ್ಠ ರಾಜ್ಯವಾಗಬೇಕು. ಈ ಇಬ್ಬರೂ ಮಹಾತ್ಮರ ಪ್ರೇರಣೆ ವಿಧಾನಸೌಧದಲ್ಲಿ ನಿಲ್ಲಲಿ ಎಂದು ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ ಎಂದರು.
ಬರುವ ದಿನಗಳಲ್ಲಿ ನಾಡಿನ ಜನತೆಗೆ ಒಳ್ಳೆಯದಾಗಿ ನವ ಕರ್ನಾಟಕ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಲಾಗಿದೆ. ಇಂದಿನಿಂದ ಈ ಕೆಲಸ ಪ್ರಾರಂಭವಾಗಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಎಲ್ಲರೂ ಸೇರಿ ಉದ್ಘಾಟನೆ ಮಾಡೋಣ ಎಂದರು. ಕನ್ನಡ ನಾಡಿಗೆ ಇದೊಂದು ಶುಭದಿನ ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ತಿಳಿಸಿದರು.
ಕನ್ನಡನಾಡಿನಲ್ಲಿ ಹುಟ್ಟಿ, ಕ್ರಾಂತಿಯನ್ನು ಮಾಡಿದ ಇಬ್ಬರು ಮಹಾನ್ ಪುರುಷರು. ಒಬ್ಬರು ವಿಶ್ವಬಂಧು, ಸಾಮಾಜಿಕ, ಆರ್ಥಿಕ ಹಾಗೂ ವೈಚಾರಿಕ ಕ್ರಾಂತಿಯನ್ನು ಕರ್ನಾಟಕದಲ್ಲಿ 12 ನೇ ಶತಮಾನದಲ್ಲಿ ಮಾಡಿ ಜಗತ್ತಿಗೆ ದರ್ಶನವನ್ನು ನೀಡಿರುವವರ ಪುತ್ಥಳಿ ಹಾಗೂ ನಾಡು ಕಟ್ಟಿರುವ ಅಪ್ರತಿಮ ನಾಯಕರು, ಜನಹಿತಕ್ಕಾಗಿ ಕರಕಟ್ಟೆಗಳು, ಊರು ಕೇರಿಗಳನ್ನು, ಮಾರುಕಟ್ಟೆಗಳನ್ನು ಕಟ್ಟಿ ಮಾದರಿ ಆಡಳಿತ ಮಾಡಿರುವ ನಾಡಪ್ರಭು ಕೆಂಪೇಗೌಡರ ಪುತ್ಥಳಿಯನ್ನು ವಿಧಾನಸಭಾ ಮುಂಭಾಗದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು.


