ಪತ್ನಿಯ ಅನಾರೋಗ್ಯಕ್ಕೆ ಚಿಕಿತ್ಸೆ ಕೊಡಿಸಲು ಮೈತುಂಬ ಸಾಲ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಬಾವಿ ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಅಳಂದ ಪಟ್ಟಣದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಅಳಂದ ಪಟ್ಟಣದ ನೇಕಾರ ಕಾಲೋನಿಯ ನಿವಾಸಿ ಸಿದ್ಧಾರೂಢ ಮಹಾಮಲ್ಲಪ್ಪ ಅಕ್ಕ ಎಂದು ಗುರುತಿಸಲಾಗಿದ್ದು, ಬಾವಿಗೆ ತಳ್ಳಿರುವ ಮಕ್ಕಳನ್ನು ಮನೀಶ್ ಮತ್ತು ಶ್ರೇಯಾ ಎಂದು ತಿಳಿದುಬಂದಿದೆ.
ಮಾರ್ಕೆಟ್ ಪ್ರದೇಶದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡು ಸಿದ್ದಾರೂಢ ಜೀವನ ನಡೆಸುತ್ತಿದ್ದರು. ಅವರ ಮಕ್ಕಳಾದ ಮನೀಶ್ ಮತ್ತು ಶ್ರೇಯಾ ನೇತಾಜಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರನ್ನು ಗುರುವಾರ ಶಾಲೆಗೆ ಬಿಟ್ಟುಬಂದಿದ್ದ ಸಿದ್ಧಾರೂಢ ಸಂಜೆ ಕರೆದುಕೊಂಡು ಬರುವಾಗ ಪ್ರವಾಸಿ ಮಂದಿರ ಮತ್ತು ಬಸ್ ಘಟಕದ ಮಧ್ಯೆ ಇರುವ ಬಾವಿ ಬಳಿ ಬೈಕ್ ನಿಲ್ಲಿಸಿ ಮಕ್ಕಳ ಸಮೇತ ಆತ್ಹಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ತೆರಳಿ ಶೋಧ ಕಾರ್ಯ ನಡೆಸಿದ್ದು ಮೂವರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.


