ಪರಿಶಿಷ್ಟ ಸಮುದಾಯಗಳತ್ತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಣ್ಣೊರೆಸುವುದಿರಲಿ, 5 ವರ್ಷಗಳ ಕಾಲ ಅವರ ಕಡೆ ತಿರುಗಿಯೂ ನೋಡಿರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ.
ಬೆಂಗಳೂರಿನ ರೇಸ್ ಕೋರ್ಸ್ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಒಳಮೀಸಲಾತಿಗೆ ಸಚಿವ ಸಂಪುಟ ಉಪಸಮಿತಿ ರಚಿಸಿರುವುದು ಕಣ್ಣೊರೆಸುವ ತಂತ್ರ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಸಿದ್ದರಾಮಯ್ಯ ಅವರು ಈ ಕುರಿತು ವರದಿಯನ್ನು ತೆಗೆದು ನೋಡುವ ರ್ಧೈರ್ಯ ಇರಲಿಲ್ಲ ಎಂದು ಟೀಕಿಸಿದರು.
ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಬರೀ ದೀಪ ಹಚ್ಚಿ ಮಾತನಾಡದೆ ಬಂದರು. ಇಂಥವರಿಂದ ನಾವು ಪಾಠ ಕಲಿಯಬೇಕಿಲ್ಲ. ನಮ್ಮ ಬದ್ಧತೆ ಏನೆಂದು ಎಲ್ಲಾ ಸಮುದಾಯಗಳಿಗೆ ತಿಳಿದಿದೆ ಎಂದರು.
ಕಾನೂನು ಸ್ಥಾನಮಾನವೋ ನಮಗೆ ತಿಳಿದಿದೆ. ಇಂಥ ಪ್ರಮುಖ ವಿಚಾರಗಳಲ್ಲಿ ನಿರ್ಣಯ ಕೈಗೊಳ್ಳುವ ದಿಟ್ಟತನ ಸರ್ಕಾರಕ್ಕೆ ಇದೆ ಎಂದು ತೋರಿಸಿದ್ದೇವೆ. ಇನ್ನೊಬ್ಬರ ಬಗ್ಗೆ ಮಾತನಾಡುವ ಮುನ್ನ ಸಿದ್ದರಾಮಯ್ಯ ಹಿಂತಿರುಗಿ ನೋಡಿದರೆ ಉತ್ತಮ ಎಂದು ಸಲಹೆ ನೀಡಿದರು.