ಕರ್ನಾಟಕ ರಾಜ್ಯವನ್ನು ಬಿಹಾರ, ಗುಜರಾತ್ ಮತ್ತು ಉತ್ತರಪ್ರದೇಶವನ್ನಾಗಿ ಮಾಡಲು ಬಿಡುವುದಿಲ್ಲ ಎಂದು ಹಿರಿಯ ರಂಗಕರ್ಮಿ ಬಸವಲಿಂಗಯ್ಯ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇದು ಬುದ್ದನ ನಾಡು, ಆದರೂ ಬುದ್ದನೇ ಇಲ್ಲಿ ಪರಕೀಯನಾಗಿದ್ದಾನೆ. ಮೂಲನಿವಾಸಿಗಳನ್ನು ಮೂಲೆ ಗುಂಪು ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿ ದಲಿತರು ಯಾರನ್ನೂ ಕೊಂದಿಲ್ಲ. ಮೋಸ ಮಾಡಿಲ್ಲ. ಈ ಹಿಂದೆ ಸಿದ್ದಲಿಂಗಯ್ಯನವರ ಇಕ್ಕುರ್ಲ ಹೊದಿರ್ಲಾ ಎಂದು ಹಾಡಿದ್ದೇವೆ. ಜೊತೆಗೆ ಕಟ್ಟುತ್ತೇವ ನಾವು ಕಟ್ಟೇಕಟ್ಟುತ್ತೇವಾ ಹಾಡನ್ನು ಸಹ ಹಾಡಿದ್ದೇವೆ. ನಮ್ಮದು ಸಾಂಸ್ಕೃತಿಕ ಪ್ರತಿರೋಧ ಎಂದು ಹೇಳಿದರು.
ದಲಿತರ ತಮಟೆಯನ್ನು ಜನ ಕೀಳೆಂದು ತಿಳಿದಿದ್ದರು. ಅದನ್ನೇ ನಮ್ಮ ಹೋರಾಟದ ಅಸ್ತ್ರ ಮಾಡಿಕೊಂಡಿದ್ದೇವೆ. ಜಂಬೆ ಎನ್ನುವುದು ಆಫ್ರಿಕಾದಲ್ಲಿ ಹುಟ್ಟಿತು. ಅದಕ್ಕೂ ನಮಗೂ ಡಿಎನ್ಎ ಸಂಬಂಧವಿದೆ. ಜಂಬೆ ಇಂದು ವಿಶ್ವವ್ಯಾಪಿಯಾಗಿದೆ