ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಶೇಕಡ 40ರಷ್ಟು ಕಮಿಷನ್ ಸರ್ಕಾರವಾಗಿದೆ. ಇದೊಂದು ನಿಷ್ಪ್ರಯೋಜಕ ಸರ್ಕಾರವಾಗಿದೆ. ಇದು ರಾಜ್ಯದ ಜನರ ಮತದಿಂದ ರಚನೆಯಾಗಿಲ್ಲ. ಬದಲಿಗೆ ಶಾಸಕರನ್ನು ಖರೀದಿಸಿ ಮಾಡಿದ ಸರ್ಕಾರವಾಗಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ್ ಆರೋಪಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಸುರ್ಜೇವಾಲ್, ಈ ಸರ್ಕಾರಕ್ಕೆ ಒಂದು ದಿನವೂ ಆಡಳಿತ ನಡೆಸಲು ಯೋಗ್ಯವಲ್ಲ. 40ರಷ್ಟು ಕಮಿಷನ್ ಪಡೆಯುವ ಸರ್ಕಾರ ಇದಾಗಿದೆ ಎಂದು ದೂರಿದರು.
ರಾಜ್ಯದ ಎಲ್ಲಾ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದು ನಿಮ್ಮ ಸಚಿವರು, ಶಾಸಕರು ಶೇ.40ರಷ್ಟು ಲಂಚ ಕೇಳುತ್ತಿದ್ದಾರೆ. ಈ ಬಗ್ಗೆ ಪ್ರಧಾನಿ ಮೌನ ವಹಿಸಿದ್ದಾರೆ. ಅದೇ ಪ್ರಧಾನಿ ಕರ್ನಾಟಕಕ್ಕೆ ಬಂದು ಆಗಿನ ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸಿದ್ದರು.
ಈಗ ಸಿಬಿಐ, ಇಡಿ, ಭ್ರಷ್ಟಾಚಾರ ನಿಗ್ರಹ ದಳಗಳು ಎಲ್ಲಿವೆ? ಪ್ರಧಾನಿ, ಮುಖ್ಯಮಂತ್ರಿ ಮೌನಕ್ಕೆ ಜಾರಿದ್ದಾರೆ. ಕ್ರಮ ಕೈಗೊಳ್ಳುವ ಬದಲು ಸಾಕ್ಷಿ ಕೇಳುತ್ತಿದ್ದಾರೆ. ನಾವು ಸಾಕ್ಷಾಧಾರಗಳನ್ನು ನೀಡಲು ಸಿದ್ಧ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಆದರೂ ಸ್ವತಂತ್ರ ತನಿಖೆ ಯಾಕೆ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.
ಸದ್ಯದಲ್ಲೇ ಅಮಿತ್ ಶಾ ಹಾಗೂ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂಬ ವಿಚಾರ ಕೇಳಿದ್ದೇನೆ. ಅವರು ಇಲ್ಲಿರುವ ಎಲ್ಲಾ ಭ್ರಷ್ಟ ಮಂತ್ರಿಗಳನ್ನು ಕಿತ್ತೊಗೆಯಬೇಕು, ಇಲ್ಲದಿದ್ದರೆ ಇಲ್ಲಿ ದೋಚಲಾಗುತ್ತಿರುವ ಹಣ ದೆಹಲಿ ಸರ್ಕಾರಕ್ಕೆ ಮತ್ತು ನಾಗ್ಪುರಕ್ಕೆ ರವಾನೆಯಾಗಲಿದೆ ಎಂಬುದು ಸಾಬೀತಾಗುತ್ತದೆ ಎಂದು ಗಂಭೀರ ಆರೋಪ ಮಾಡಿದರು.
ಇಂದು ಮತ್ತೆ ಮತ್ತೊಂದು ಕ್ರಾಂತಿಯ ಸಂಕಲ್ಪ ಮಾಡಬೇಕು. ರಾಜ್ಯಕ್ಕೆ ಹೊಸ ಆಲೋಚನೆ ನೀಡಿ ಹೊಸ ದಾರಿಯಲ್ಲಿ ಮುನ್ನಡೆಸಲು ಯುವಕರಿಗೆ ಉದ್ಯೋಗ, ರೈತರಿಗೆ ಹೊಸ ಜೀವನ, ಸಣ್ಣ ಉದ್ಯೋಗದಾತರು, ವ್ಯಾಪಾರಿ, ದಲಿತರಿಗೆ ಕಲ್ಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ, ಎಲ್ಲರೂ ಒಟ್ಟಾಗಿ ನಿಭಾಯಿಸಬೇಕು ಎಂದು ಸಲಹೆ ನೀಡಿದರು.
ಮುಂದಿನ 12 ತಿಂಗಳಲ್ಲಿ ರಾಜ್ಯದಲ್ಲಿ ಕೇವಲ ಸರ್ಕಾರ ಬದಲಿಸುವುದು ಮಾತ್ರವಲ್ಲ, ವ್ಯವಸ್ಥೆ, ಶಾಸನಗಳು, ದೃಷ್ಟಿಕೋನ ಬದಲಾವಣೆ ಮಾಡಿ ಗೌರವಯುತ ಕರ್ನಾಟಕಕ್ಕಾಗಿ ಪಾರದರ್ಶಕ ಹಾದಿಯಲ್ಲಿ ಸಾಗುವ ಜವಾಬ್ದಾರಿಯುತ ಜನಪರ ಕೆಲಸ ಮಾಡುವ ಸರ್ಕಾರ ಕೊಡಬೇಕು. ಈ 40ರಷ್ಟು ಲಂಚದ ಸರ್ಕಾರವನ್ನು ಶಾಶ್ವತವಾಗಿ ದೂರ ಮಾಡಬೇಕು ಎಂದು ಕರೆ ನೀಡಿದರು.