ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಪ್ರತಿಪಕ್ಷ ಬಿಜೆಪಿ ಶಾಸಕರು ಆರೋಪಿಸಿದ ಕಾರಣ ಬಿಜೆಪಿ ಶಾಸಕರು ಮತ್ತು ಟಿಎಂಸಿ ಶಾಸಕರ ನಡುವೆ ಮಾತಿನಚಕಮಕಿ ನಡೆದು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಕೋಲಾಹಲ ಉಂಟಾಗಿ ಬಿಜೆಪಿಯ ಸುವೇಂಧು ಅಧಿಕಾರಿ ಸೇರಿದಂತೆ ಐವರು ಶಾಸಕರನ್ನು ಅಮಾನತು ಮಾಡಲಾಗಿದೆ.
ಬಿಜೆಪಿ ಶಾಸಕರು ಬೊಗ್ಟುಯಿ ವಿಷಯದ ಮೇಲೆ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಗೃಹ ಖಾತೆ ಹೊಂದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜಿನಾಮೆಗೆ ಒತ್ತಾಯಿಸಿದರು. ಬಿಜೆಪಿ ಶಾಸಕರು ಸದನದ ಬಾವಿಗೆ ನುಗ್ಗಿ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು.
ಆಗ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರು ಪದೇ ಪದೇ ವಿರೋಧ ಪಕ್ಷದ ಶಾಸಕರನ್ನು ತಮ್ಮ ಆಸನದಲ್ಲಿ ಕುಳಿತುಕೊಳ್ಳುವಂತೆ ವಿನಂತಿಸಿದರು. ಆದರೆ ಬಿಜೆಪಿ ಶಾಸಕರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು.
ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ನೇತೃತ್ವದ ಸುಮಾರು 25 ಬಿಜೆಪಿ ಶಾಸಕರು ಆಡಳಿತಾರೂಢ ಟಿಎಂಸಿ ವಿರುದ್ಧ ಪ್ರತಿಭಟನೆ ನಡೆಸಿ ಸದನದಿಂದ ಹೊರ ನಡೆದರು. ಇದರಿಂದ ಟಿಎಂಸಿ ಸದಸ್ಯರು ಕೂಡ ಆಕ್ರೋಶ ಹೊರಹಾಕಿದರು.
ವಿಧಾನಸಭೆ ಒಳಗೂ ಶಾಸಕರು ಸುರಕ್ಷಿತವಾಗಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿ ಹೇಳಿಕೆ ನೀಡಬೇಕು ಎಂದು ಬಿಜೆಪಿ ಶಾಸಕರು ಒತ್ತಾಯಿಸಿದರು. ಇದೇ ವೇಳೆ ಮುಖ್ಯ ಸಚೇತಕ ಮನೋಜ್ ತಿಗ್ಗಾ ಸೇರಿ ನಮ್ಮ 8-10 ಶಾಸಕರನ್ನು ಟಿಎಂಸಿಯ ಕೆಲ ಶಾಸಕರು ಥಳಿಸಿದ್ದಾರೆ ಎಂದು ಸುವೇಂದು ಅಧಿಕಾರಿ ಆರೋಪಿಸಿದರು.
ಆಗ ವಿಧಾನಸಭೆಯಲ್ಲಿ ಗೊಂದಲ ಸೃಷ್ಟಿಸಲು ಬಿಜೆಪಿ ನಾಟಕವಾಡುತ್ತಿದೆ ಎಂದು ಟಿಎಂಸಿ ನಾಯಕ ಹಾಗೂ ರಾಜ್ಯ ಸಚಿವ ಫಿರ್ಹಾದ್ ಹಕೀಮ್ ಮಾಧ್ಯಮಗಳಿಗೆ ತಿಳಿಸಿದರು. ಸದನದೊಳಗೆ ನಮ್ಮ ಕೆಲವು ಶಾಸಕರು ಗಾಯಗೊಂಡಿದ್ದಾರೆ ಬಿಜೆಪಿಯ ನಡವಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.