ತುಮಕೂರು ಜಿಲ್ಲೆಯಲ್ಲಿ ಅತಿಹೆಚ್ಚು ಮಾವು ಬೆಳೆಯುವ ಪ್ರದೇಶ ಗುಬ್ಬಿ ತಾಲೂಕು ಚೇಳೂರು ಹೋಬಳಿ. ಇಲ್ಲಿನ ಮಾವು ದೇಶ ವಿದೇಶಗಳಲ್ಲೂ ಪ್ರಸಿದ್ಧಿ. ದೇಶದ ಬೇರೆಬೇರೆ ರಾಜ್ಯಗಳು ಸೇರಿ ವಿದೇಶಕ್ಕೂ ಇಲ್ಲಿಂದಲೇ ಮಾವಿನ ಹಣ್ಣ ರವಾನೆಯಾಗುತ್ತದೆ. ಇದೆಲ್ಲವೂ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈಗ ಬೇರೆಯದೇ ಸುದ್ದಿ ವ್ಯಾಪಕವಾಗಿ ಹರಡತೊಡಗಿದೆ. ಅದೇನೆಂದರೆ ಮಾವಿನ ತೋಪುಗಳನ್ನು ಖರೀದಿಸಲು ಮುಸ್ಲೀಂ ವ್ಯಾಪಾರಿಗಳು ಮುಂದೆ ಬರುತ್ತಿಲ್ಲ ಎಂಬುದು ಆತಂಕದ ಸುದ್ಧಿ.
ಕರಾವಳಿಯ ಜಿಲ್ಲೆಗಳಲ್ಲಿ ಹಿಂದೂಪರ ಸಂಘಟನೆಗಳು ಜಾತ್ರೆಗಳಲ್ಲಿ ಮುಸ್ಲೀಂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡದೇ ಇರುವುದು ಎಲ್ಲೆಡೆ ಗಂಭೀರ ಪರಿಣಾಮ ಬೀರುತ್ತಿದೆ. ಜಾತ್ರೆಯಲ್ಲಿ ವ್ಯಾಪಾರ ಮಾಡಲು ಅವಕಾಶ ನಿರಾಕರಿಸಿರುವುದರಿಂದ ಆತಂಕಗೊಂಡಿರುವ ಮುಸ್ಲೀಂ ವ್ಯಾಪಾರಿಗಳು ಮಾವಿನತೋಪು ಖರೀದಿಸಿದರೆ ಮುಂದಿನ ದಿನಗಳಲ್ಲಿ ಮಾವಿನ ಹಣ್ಣು ಮಾರಾಟಕ್ಕೆ ಅವಕಾಶ ಸಿಗದಿದ್ದರೆ ಹೇಗೆ ಎಂಬ ಬಗ್ಗೆ ಚಿಂತಿತರಾಗಿದ್ದಾರೆ.
ತುಮಕೂರು ಜಿಲ್ಲೆಯ ಚೇಳೂರು ಹೋಬಳಿಯಲ್ಲಿ ಮಾವಿನ ತೋಪುಗಳು ಹೆಚ್ಚಾಗಿದ್ದು ಮಾವಿನ ಫಸಲು ಹೇಳಿಕೊಳ್ಳುವಂಥೇನು ಬಂದಿಲ್ಲ. ಜೊತೆಗೆ ಮುಸ್ಲೀಂ ವ್ಯಾಪಾರಿಗಳು ಮೋವಿನ ತೋಪುಗಳನ್ನು ಖರೀದಿಸಲು ಮುಂದೆ ಬರುತ್ತಿಲ್ಲ ಎಂಬ ಸಂಗತಿ ಮಾವು ಬೆಳೆಗಾರರನ್ನು ಆತಂಕಗೊಳ್ಳುವಂತೆ ಮಾಡಿದೆ. ಕರಾವಳಿಯಲ್ಲಿ ತೆಗೆದುಕೊಂಡ ಹಿಂದೂ ಸಂಘಟನೆಗಳ ತೀರ್ಮಾನ ಮಾವು ಬೆಳೆಗಾರರು ಮತ್ತು ಮಾವಿನ ತೋಪು ಖರೀದಿ ಮಾಡುವ ವ್ಯಾಪಾರಿಗಳು ಇಬ್ಬರು ಆತಂಕಕ್ಕೆ ಈಡಾಗುವಂತೆ ಮಾಡಿದೆ.
ಮಾವಿನ ತೋಪು ಖರೀದಿಸಿದರೆ ಮಾವು ಮಾರಾಟಕ್ಕೆ ಅವಕಾಶ ದೊರೆಯುತ್ತದೆಯೇ ಅಥವ ಇಲ್ಲವೇ ಎಂಬ ಯೋಚನೆ ವ್ಯಾಪಾರಿಗಳದ್ದು, ಮಾವಿನ ತೋಪು ಖರೀದಿಯಾಗದಿದ್ದರೆ, ಮೊದಲೇ ಬೆಳೆ ಕಡಿಮೆ ಬಂದಿದೆ ಏನು ಮಾಡುವುದು ಎಂಬುದು ಮಾವು ಬೆಳೆಗಾರರಿಗೆ ಬಂದಿರುವ ಸಂಕಟ. ಮಾವು ಬೆಳೆಗಾರರು ಮತ್ತು ಮಾವು ಖರೀದಿಸುವ ವ್ಯಾಪಾರಿಗಳು ಉಭಯ ಸಂಕಟಕ್ಕೆ ಒಳಗಾಗಿದ್ದಾರೆ.
ಮಾವಿನ ತೋಪುಗಳನ್ನು ಹಿಂದೂ ವ್ಯಾಪಾರಿಗಳು ಅಷ್ಟಾಗಿ ಖರೀದಿ ಮಾಡುವುದಿಲ್ಲ. ಆದರೆ ಮುಸ್ಲಿಂ ವ್ಯಾಪಾರಿಗಳೇ ಹೆಚ್ಚಾಗಿ ಮಾವಿನ ತೋಪು ಖರೀದಿ ಮಾಡುವುದರಲ್ಲಿ ನಿಸ್ಸೀಮರು. ವ್ಯಾಪಾರ ಕುದಿರಿದ ಮೇಲೆ ಮಾವು ತೋಪುಗಳನ್ನು ತಮ್ಮ ವಶಕ್ಕೆ ಪಡೆಯುವ ವ್ಯಾಪಾರಿಗಳು ಮಾವು ಫಸಲು ಕೈಗೆ ಬರುವವರೆಗೂ ತೋಪು ಕಾವಲಿಗೆ ಕಾವಲುಗಾರರನ್ನು ನೇಮಕ ಮಾಡಿ ಕೊಯ್ಲು ಮಾಡುವವರೆಗೆ ಮತ್ತು ಅದನ್ನು ಕೋಲಾರಕ್ಕೆ ಕಳಿಸುವವರೆಗೆ ಎಲ್ಲಾ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ. ಆದರೆ ಕರಾವಳಿಯಲ್ಲಿ ತೆಗೆದು ಕೊಂಡ ಹಿಂದೂ ಸಂಘಟನೆಗಳ ನಿರ್ಧಾರ ಮಾವಿನ ತೋಪು ಖರೀದಿಗೆ ಮುಸ್ಲೀಂ ವ್ಯಾಪಾರಿಗಳು ಸ್ವಲ್ಪ ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸಣ್ಣ ಸಣ್ಣ ವಿಷಯಗಳು ಹೇಗೆ ಮಾವು ಬೆಳೆಗಾರರು ಮತ್ತು ವ್ಯಾಪಾರಿಗಳ ನಡುವೆ ಕಂದಕ ಉಂಟು ಮಾಡುತ್ತವೆ ಎಂಬುದು ನಿಧಾನವಾಗಿ ಅರಿವಿಗೆ ಬರತೊಡಗಿದೆ. ಎಲ್ಲಿಯದೋ ತೀರ್ಮಾನ ಇನ್ನೆಲ್ಲಿಯೋ ಪರಿಣಾಮ ಮತ್ತು ಪ್ರಭಾವ ಬೀರುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮಾವಿನ ತೋಪುಗಳನ್ನ ಖರೀದಿ ಮಾಡಬೇಕೆ ಮತ್ತು ಬೇಡವೇ ಎಂಬ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ. ವ್ಯಾಪಾರಿಗಳು ಮತ್ತು ಮಾವು ಬೆಳೆಗಾರರು ಗೊಂದಲಕ್ಕೆ ಸಿಲುಕಿದ್ದಾರೆ. ಲಕ್ಷಾಂತರ ರೂ ಮಾವು ವಹಿವಾಟಿಗೆ ಹಿನ್ನಡೆಯಾದಂತೆ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ತೋಪು ಖರೀದಿಯಾಗದಿದ್ದರೆ ಏನು ಮಾಡುವುದು, ಖರೀದಿಸಿದ ಮೇಲೆ ಮಾವು ಮಾರಾಟವಾಗದಿದ್ದರೆ ಹೇಗೆ ಎಂಬ ಆತಂಕ ಉಭಯತ್ರಯರನ್ನು ಕಾಡತೊಡಗಿದೆ. ಇದಕ್ಕೆ ಹೊಣೆ ಯಾರು? ರೈತರ ನೆರವಿಗೆ ಯಾರು ಬರುತ್ತಾರೆ ಎಂಬ ಬಗ್ಗೆ ಅಲ್ಲಲ್ಲಿ ಚರ್ಚೆಗಳು ನಡೆಯತೊಡಗಿವೆ.
ಕೆ.ಈ.ಸಿದ್ದಯ್ಯ