ಪಂಜಾಬ್ ನ 18ನೇ ಮುಖ್ಯಮಂತ್ರಿಯಾಗಿ ಎಎಪಿಯ ಭಗವಂತ್ ಮಾನ್ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
ಭಗತ್ ಸಿಂಗ್ ಅವರ ಪೂರ್ವಜನ ಗ್ರಾಮವಾದ ಖಟ್ಕರ್ ಕಲಾನ್ ನಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಭಗವಂತ್ ಮಾನ್ ಅವರಿಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದರು.
ಆಮ್ ಆದ್ಮಿ ಪಕ್ಷದ ಬೆಂಗಲಿಗರು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಗೌರವ ಸೂಚಿಸುವ ಹಿನ್ನೆಲೆಯಲ್ಲಿ ಬಸಂತಿ ಪೇಟಗಳು ಮತ್ತು ದುಪಟ್ಟಾಗಳನ್ನು ಧರಿಸಿದ್ದರು.
ನವಾನ್ ಶೆಹರ್ ಜಿಲ್ಲೆಯ ಗ್ರಾಮದಲ್ಲಿರುವ ಭಗತ್ ಸಿಂಗ್ ಸ್ಮಾರಕದ ಬಳಿ 40 ಎಕರೆ ಜಾಗದಲ್ಲಿ 50 ಸಾವಿರ ಕುರ್ಚಿಗಳನ್ನು ಹಾಕಲಾಗಿತ್ತು. ಹಳದಿ ಪರದೆಗಳನ್ನು ಹಾಕಿ ಪೆಂಡಾಲ್ ನಿರ್ಮಾಣ ಮಾಡಲಾಗಿತ್ತು. ಇಡೀ ಸಮಾರಂಭದಲ್ಲಿ ಬಸಂತಿ ಪೇಟಗಳು ಎಲ್ಲರ ಗಮನ ಸೆಳೆದವು.
ಹೊಸದಾಗಿ ಆಯ್ಕೆಯಾದ ಎಎಪಿ ಶಾಸಕರಲ್ಲದೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಕ್ಷದ ಇತರೆ ಹಿರಿಯ ನಾಯಕರು, ಸಮಾರಂಭದಲ್ಲಿ ಭಾಗಿಯಾಗಿದ್ದರು.
117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷವು 92 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಗದ್ದುಗೆಯನ್ನು ತನ್ನದನ್ನಾಗಿಸಿಕೊಂಡಿದೆ.