ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಧಾರ್ಮಿಕ ಆಚರಣೆಗಳನ್ನು ಶಿಕ್ಷಣ ಸಂಸ್ಥೆಗಳ ಹೊರಗೆ ಇಡಬೇಕು ಎಂದು ರಾಜ್ಯ ಸರ್ಕಾರ ಹೈಕೋರ್ಟ್ ನಲ್ಲಿ ಪುನರುಚ್ಚರಿಸಿದೆ.
ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂಬುದು ನಮ್ಮ ನಿಲುವು. ಸಂವಿಧಾನ ರಚನಾ ಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಧಾರ್ಮಿಕ ಆಚರಣೆಗಳನ್ನು ಶಿಕ್ಷಣ ಸಂಸ್ಥೆಗಳ ಹೊರಗೆ ಇಡೋಣ ಎಂದು ಹೇಳಿಕೆ ನೀಡಿದ್ದರು ಎಂದು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ತಿಳಿಸಿದ್ದಾರೆ.
ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಪೂರ್ಣ ಪೀಠಕ್ಕೆ ಹೇಳಿಕೆ ನೀಡಿದ್ದಾರೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಜೆ.ಎಂ.ಖಾಜಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಂ ದೀಕ್ಷಿತ್ ಪೂರ್ಣ ಪೀಠದಲ್ಲಿ ಇದ್ದು ಸರ್ಕಾರದ ನಿಲುವನ್ನು ಅಡ್ವೋಕೇಟ್ ಜನರಲ್ ನಾವಡಗಿ ಪುನರುಚ್ಚರಿಸಿದ್ದಾರೆ.
ಅಗತ್ಯ ಧಾರ್ಮಿಕ ಆಚರಣೆಗೆ ಮಾತ್ರ ಆರ್ಟಿಕಲ್ 25ರ ಅಡಿಯಲ್ಲಿ ರಕ್ಷಣೆ ಸಿಗುತ್ತದೆ. ಇದು ನಾಗರಿಕರು ತಮ್ಮ ಆಯ್ಕೆಯ ನಂಬಿಕೆಯನ್ನು ಆಚರಿಸಲು ಖಾತರಿ ನೀಡುತ್ತದೆ ಎಂದರು.
ನ್ಯಾಯಾಲಯದ ಪ್ರಕ್ರಿಯೆಗಳು ಆರಂಭವಾದ ಕೂಡಲೇ ಮುಖ್ಯನ್ಯಾಯಮೂರ್ತಿ ಅವಸ್ತಿ ಹಿಜಾಬ್ ಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟೀಕರಣಗಳ ಅಗತ್ಯವಿದೆ ಎಂದು ಹೇಳಿದರು.
ಸರ್ಕಾರ ಹಿಜಾಬ್ ಅನ್ನು ನಿಷೇಧಿಸಿಲ್ಲ ಮತ್ತು ಅದರ ಮೇಲೆ ಯಾವುದೇ ನಿರ್ಬಂಧಗಳನ್ನು ಹಾಕಿಲ್ಲ ಎಂದು ನೀವು ವಾದಿಸಿದ್ದೀರಿ. ವಿದ್ಯಾರ್ಥಿಗಳು ನಿಗದಿತ ಸಮವಸ್ತ್ರವನ್ನು ಧರಿಸಬೇಕು ಎಂದು ಸರ್ಕಾರದ ಆದೇಶ ಹೇಳುತ್ತದೆ. ನಿಮ್ಮ ನಿಲುವು ಏನು? ಹಿಜಾಬ್ ಅನ್ನು ಅನುಮತಿಸಬಹುದೇ ಮುಖ್ಯನ್ಯಾಯಮೂರ್ತಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ನಾವಡಗಿ ಸಂಸ್ಥೆಗಳು ಅನುಮತಿ ನೀಡಿದರೆ ಸಮಸ್ಯೆ ಉದ್ಬವಿಸಿದಾಗ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.