ಬಿಜೆಪಿ ಜನವಿರೋಧಿ ತೀರ್ಮಾನಗಳನ್ನು ಮಾಡುತ್ತಿದ್ದು ಇದರ ವಿರುದ್ಧ ಹೋರಾಡಲು ದೇಶದಲ್ಲಿ ಮೂರನೇ ರಂಗ ರಚನೆಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಕಸರತ್ತು ನಡೆಸಿದ್ದಾರೆ.
ಇದರ ಭಾಗವಾಗಿ ಟಿಆರ್.ಎಸ್ ಅಧ್ಯಕ್ಷ ಚಂದ್ರಶೇಖರ ರಾವ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಮತ್ತು ಎನ್.ಸಿ.ಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲವನ್ನು ಕೆರಳಿಸಿದೆ.
ಚಂದ್ರಶೇಖರ ರಾವ್ ತಮ್ಮ ಪಕ್ಷದ ಮುಖಂಡರೊಂದಿಗೆ ಬೇಗಂಪೇಟೆ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಿ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಉದ್ದವ್ ಠಾಕ್ರೆ ನಿವಾಸದಲ್ಲಿ ಊಟ ಮಾಡಿದರೆಂದು ಮಾಧ್ಯಮಗಳು ವರದಿ ಮಾಡಿದೆ.
ಠಾಕ್ರೆ ಅವರೊಂದಿಗಿನ ಸಭೆಯ ನಂತರ ಶರದ್ ಪವಾರ್ ಅವರ ನಿವಾಸಕ್ಕೆ ತೆರಳಿ ರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯ ಜನವಿರೋಧಿ ನೀತಿಗಳ ವಿರುದ್ಧ ಮೂರನೇ ರಂಗವನ್ನು ರಚಿಸುವ ಬಗ್ಗೆ ಮತ್ತು ಬಿಜೆಪಿ ವಿರುದ್ಧ ಹೋರಾಟ ನಡೆಸಲು ಉದ್ದವ್ ಠಾಕ್ರೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಾವ್ ಅವರ ಭೇಟಿ ಮತ್ತು ಚರ್ಚಿಸಿದ ವಿಷಯಗಳನ್ನು ಹಂಚಿಕೊಳ್ಳದಿದ್ದರೂ ದೇಶವನ್ನು ವಿಭಜಕ ಶಕ್ತಿಗಳಿಂದ ರಕ್ಷಿಸಲು ಸರಿಯಾದ ಸಮಯದಲ್ಲಿ ರಾವ್ ಧ್ವನಿ ಎತ್ತಿದ್ದಾರೆ ಎಂದು ಮಹಾರಾಷ್ಟ್ರ ಸಿಎಂ ಠಾಕ್ರೆ ಪ್ರಕಟಣೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರದ ಜನವಿರೋಧಿ ನೀತಿಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಎಲ್ಲಾ ಪ್ರತಿಪಕ್ಷಗಳು ಮುಂದಾಗಬೇಕು ಎಂದು ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದಾಗಿ ರಾವ್ ಹೇಳಿದ್ದಾರೆ.