ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚುನಾವಣಾ ಪ್ರಚಾರ ಭಾಷಣ ಆರಂಭಿಸುತ್ತಿದ್ದಂತೆ ಯುವಕರು ಘೋಷಣೆಗಳನ್ನು ಕೂಗಿ ಭಾಷಣಕ್ಕೆ ಅಡ್ಡಿಪಡಿಸಿದ ಪ್ರಸಂಗ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದಿದೆ.
ಉದ್ಯೋಗ ಆಕಾಂಕ್ಷಿಗಳು ಉದ್ಯೋಗ ಕೊಡುವಂತೆ ಘೋಷಣೆಗಳನ್ನು ಕೂಗಿ ಭಾಷಣಕ್ಕೆ ಅಡ್ಡಿಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಭಾರತೀಯ ಸೇನೆಯಲ್ಲಿ ಪುರುಷರ ನೇಮಕಾತಿಯೂ ನಡೆಯಲಿದೆ ಎಂದು ಹೇಳಿದರು.
ಸೇನೆಯಲ್ಲಿ ನೇಮಕಾತಿ ಆರಂಭಿಸಿ, ನಮ್ಮ ಬೇಡಿಕೆಯನ್ನು ಈಡೇರಿಸಿ ಎಂಬ ಘೋಷಣೆಗಳನ್ನು ಸಮಾವೇಶಕ್ಕೆ ಆಗಮಿಸಿದ್ದ ಕಾರ್ಯಕರ್ತರು ಕೂಗಿ ಸಚಿವರ ಗಮನ ಸೆಳೆದರು.
ಸಚಿವ ಸಿಂಗ್ ಅವರು ನಂತರ ಪ್ರತಿಭಟನಾನಿರತ ಯುವಕರನ್ನು ಸಮಾಧಾನಪಡಿಸಲು ಯತ್ನಿಸಿದರು. ಹೋಗಿ, ಹೋಗಿ ಸೇನಾ ನೇಮಕಾತಿ ನಡೆಯುತ್ತದೆ. ಚಿಂತಿಸಬೇಡಿ. ನಿಮ್ಮ ಚಿಂತೆ ನಮ್ಮದೂ ಆಗಿದೆ. ಕೊರೊನ ಸೋಂಕಿನಿಂದ ಕೆಲವು ತೊಂದರೆಗಳಾಗಿವೆ ಎಂದು ಸಮಾಧಾನ ಮಾಡಲು ಯತ್ನಿಸಿದರು.
ಯುಪಿಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರ ಪ್ರತಿ ವರ್ಷ ಹೋಳಿ ಮತ್ತು ದೀಪಾವಳಿ ಸಂದರ್ಭದಲ್ಲಿ ಉಚಿತ ಎಲ್.ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಒದಗಿಸುತ್ತದೆ ಎಂದು ಸಿಂಗ್ ಭರವಸೆ ನೀಡಿದರು.
ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ ಲಕ್ಷಾಂತರ ಉದ್ಯೋಗಗಳು ಮತ್ತು ಸರ್ಕಾರಿ ಉದ್ಯೋಗಗಳನ್ನು ಕ್ರಮಬದ್ದ ಗೊಳಿಸುವುದಾಗಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಭರವಸೆ ನೀಡಿದರು.