ಸರ್ಜಿಕಲ್ ಸ್ಟ್ರೈಕ್ ಮಾಡಿರುವುದಕ್ಕೆ ಪುರಾವೆಗಳನ್ನು ತೋರಿಸುವಂತೆ ಕೇಂದ್ರ ಸರ್ಕಾರವನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಒತ್ತಾಯಿಸಿದ್ದಾರೆ.
ಈ ಸಂಬಂಧ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡ ರಾವ್ ತಾವೂ ಕೂಡ ಪುರಾವೆ ನೀಡುವಂತೆ ಕೇಳುತ್ತಿದ್ದೇನೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪುರಾವೆ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಏನು ತಪ್ಪಾಗಿದೆ ಎಂದು ನಾನು ಕೇಳುತ್ತಿದ್ದೇನೆ. ಪುರಾವೆಗಳನ್ನು ಒಕ್ಕೂಟ ಸರ್ಕಾರ ತೋರಿಸಲಿ ಎಂದು ಮಾಧ್ಯಮಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಪುರಾವೆ ತೋರಿಸುವುದು ಕೇಂದ್ರದ ಜವಾಬ್ದಾರಿ. ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ ಎಂಬ ಬಗ್ಗೆ ಜನರಲ್ಲಿ ಆತಂಕ ಇದೆ. ಅದಕ್ಕಾಗಿಯೇ ಜನರು ಪುರಾವೆ ಕೇಳುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನೀವು ರಾಜನೂ ಅಲ್ಲ ಎಂದು ರಾಹುಲ್ ಕೇಳಿದ್ದರು. ಅವರು ಹಾಗೆ ಕೇಳಲು ಹಕ್ಕಿದೆ. ನೀವು ಉತ್ತರಿಸಿ ಎಂದು ರಾವ್ ಹೇಳಿದರು.
ಸರ್ಜಿಕಲ್ ಸ್ಟ್ರೈಕ್ ಪುರಾವೆ ಕೇಳಿದ್ದಕ್ಕೆ ರಾಹುಲ್ ಗಾಂಧಿ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಮಾಡಿರುವ ಆಕ್ಷೇಪಾರ್ಹ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ಜಿಕಲ್ ಸ್ಟ್ರೈಕ್ ನಡೆದಿದ್ದರೆ ಅದರ ಲಾಭ ಸೇನೆಗೆ ಹೋಗಬೇಕು. ಬಿಜೆಪಿಗೆ ಅಲ್ಲ ಎಂದು ಕೆಸಿಆರ್ ಹೇಳಿದರು.
ಬಿಜೆಪಿಯ ರಾಜಕೀಯ ಲಾಭಕ್ಕಾಗಿ ಸರ್ಜಿಕಲ್ ಸ್ಟ್ರೈಕ್ ಗಳನ್ನು ಬಳಸಲು ಬಯಸುತ್ತದೆ. ಖಂಡಿತವಾಗಿಯೂ ರಾಹುಲ್ ಗಾಂಧಿ ಕೇಳಿರುವುದು ಸರಿಯಾಗಿಯೇ ಇದೆ. ಉತ್ತರಖಂಡ ಚುನಾವಣೆಯಲ್ಲಿ ಬಿಜೆಪಿ ಧ್ವಜದೊಂದಿಗೆ ಬಿಪಿನ್ ರಾವತ್ ಪೋಟೋಗಳನ್ನು ಬಿಜೆಪಿ ಬಳಸಿಕೊಂಡಿದ್ದಕ್ಕೆ ರಾವ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
ಬಿಜೆಪಿ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಬ್ಯಾಂಕ್ಗಳಿಂದ ಲಕ್ಷ ಕೋಟಿ ಲೂಟಿ ಮಾಡಿದ 33 ಆರ್ಥಿಕ ಅಪರಾಧಿಗಳು ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ ಎಂದು ಹೇಳಿದರು.