ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪುಹಣ ಮತ್ತು ನಿರುದ್ಯೋಗದ ಬಗ್ಗೆ ಚುನಾವಣ ಭಾಷಣಗಳಲ್ಲಿ ಮಾತನಾಡುತ್ತಿಲ್ಲ ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಹೋಶಿಯಾರ್ ಪುರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿ ಮಾತನಾಡಿದ ರಾಹುಲ್, ನೋಟು ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆಯ ಬಗ್ಗೆ ತುಟಿ ಬಿಚ್ಚಿಲ್ಲ ಎಂದು ವಾಗ್ದಾಳಿ ನಡೆಸಿದರು. ಪ್ರಧಾನಿಯಿಂದ ಎರಡು-ಮೂರು ಬಿಲಿಯನೇರ್ ಗಳು ಮಾತ್ರ ಲಾಭ ಪಡೆದಿದ್ದಾರೆ ಎಂದು ಆರೋಪಿಸಿದರು.
ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಬಡತನವನ್ನು ಅರ್ಥಮಾಡಿಕೊಂಡಿದ್ದಾರೆ. ಚನ್ನಿ ರೈತರು, ಬಡವರು, ಸಣ್ಣ ವ್ಯಾಪಾರಿಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸರ್ಕಾರವನ್ನು ನಡೆಸುತ್ತಿದ್ದಾರೆ. ಕೋಟ್ಯಧಿಪತಿಗಳ ಲಾಭಕ್ಕಾಗಿ ಅಲ್ಲ ಎಂದು ರಾಹುಲ್ ಹೇಳಿದರು.
ನಮ್ಮ ಮುಂದೆ ಪಂಜಾಬ್ ಚುನಾವಣೆಗಳಿವೆ. ಇದು ಸಾಮಾನ್ಯ ಚುನಾವಣೆಯಲ್ಲ. ಹಾಗಾಗಿ ನೀವು ಹೊಸ ಸರ್ಕಾರವನ್ನು ಆಯ್ಕೆ ಮಾಡಬೇಕು. ಇಂದು ದೇಶದಲ್ಲಿ ಪ್ರತಿರಾಜ್ಯದಲ್ಲೂ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಇದರ ಬಗ್ಗೆ ಮೋದಿ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.
15 ಲಕ್ಷ ರೂಪಾಯಿ ಬ್ಯಾಂಕ್ ಖಾತೆಗೆ ವರ್ಗಾಯಿಸುವ ಭರವಸೆ ನೀಡಿದರು. ಯುವಕರಿಗೆ 2 ಕೋಟಿ ಉದ್ಯೋಗ ಕೊಡುವ ಭರವಸೆ ಕೊಟ್ಟರು. ಈ ವಿಷಯಗಳು ಈಗ ಚರ್ಚೆಗೆ ಬರುತ್ತಿಲ್ಲ ಎಂದು ದೂರಿದರು.
ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಎಎಪಿಗೆ ಪಂಜಾಬ್ ಅರ್ಥವಾಗಿಲ್ಲ ಮತ್ತು ಹಾಗಾಗಿ ರಾಜ್ಯವನ್ನು ನಿಭಾಯಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಮಾತ್ರ ಪಂಜಾಬ್ ಅನ್ನು ಅರ್ಥಮಾಡಿಕೊಂಡಿದೆ. ಮುಂದುವರೆಸುವುದೂ ಗೊತ್ತು ಎಂದರು.


