ತ್ರಿಪುರದಲ್ಲಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರೊಂದಿಗೆ ಮುನಿಸಿಕೊಂಡಿರುವ ಇಬ್ಬರು ಹಾಲಿ ಶಾಸಕರು ರಾಜಿನಾಮೆ ನೀಡಿದ್ದು ಆಡಳಿತಾರೂಢ ಬಿಜೆಪಿಗೆ ತೀವ್ರ ಆಘಾತವನ್ನುಂಟು ಮಾಡಿದೆ.
ಸುದೀಪ್ ರಾಯ್ ಬರ್ಮನ್ ಮತ್ತು ಆಶಿಶ್ ಸಾಹ ಅವರು ತಮ್ಮ ರಾಜಿನಾಮೆ ಪತ್ರವನ್ನು ಸಭಾಧ್ಯಕ್ಷ ರತನ್ ಚಕ್ರವರ್ತಿ ಅವರಿಗೆ ಕಳುಹಿಸಿದ್ದಾರೆ.
ಅಷ್ಟೇ ಅಲ್ಲ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ ಬಿಜೆಪಿ ರಾಜ್ಯಾಧ್ಯಕ್ಷ ಮಾಣಿಕ್ ಸಹಾ ಅವರಿಗೆ ಪತ್ರವನ್ನು ಕಳಿಸಿದ್ದೇವೆ ಎಂದು ಸಹಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬಿಜೆಪಿ ಬಂಡಾಯ ಶಾಸಕರು ದೆಹಲಿಯಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಮತ್ತು ತ್ರಿಪುರ ಉಸ್ತುವಾಋಇ ಅಜೋಯ್ ಕುಮಾರ್, ಬಿಜೆಪಿ ಶಾಸಕರ ರಾಜಿನಾಮೆಯಿಂದಾಗಿ ತ್ರಿಪುರದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ದೇಬ್ ವಿರುದ್ಧ ಹರಿಹಾಯ್ದಿರುವ ಕುಮಾರ್ ಬಿಜೆಪಿ ಸರ್ಕಾರ ತ್ರಿಪುರದ ಜನರ ಮೂಲಭೂತ ಹಕ್ಕುಗಳನ್ನು ಕತ್ತು ಹಿಸುಕುತ್ತಿದೆ ಎಂದು ಆರೋಪಿಸಿದರು.
ಇತ್ತೀಚಿನ ರಾಜಿನಾಮೆಯಿಂದ 60 ಸದಸ್ಯ ಬಲದ ತ್ರಿಪುರ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯೆ 33ಕ್ಕೆ ಕುಸಿದಿದೆ. ದೇಬ್ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುವುದಕ್ಕೆ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. 2020ರಲ್ಲೂ 9 ಮಂದಿ ಬಿಜೆಪಿ ಶಾಸಕರು ದೇವ್ ದುರಾಡಳಿತ ವಿರುದ್ಧ ಬಹಿರಂಗವಾಗಿ ಟೀಕೆ ಮಾಡಿದ್ದರು.