ತುಮಕೂರು: ಇರಾನ್ ಮತ್ತು ಅಮೆರಿಕಾ ಯುದ್ದದಲ್ಲಿ 165 ಮಕ್ಕಳು ಸತ್ತರೂ ವಿಶ್ವ ಸಂಸ್ಥೆ ಕಣ್ಮುಚ್ಚಿ ಕುಳಿತಿರುವುದು ನೋಡಿದರೆ, ಇದರ ಅಗತ್ಯವಿದೆಯೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ನಾಡೋಜ ಗೋ.ರು.ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತುಮಕೂರು ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪಂಡಿತ್ ಚನ್ನಪ್ಪ ಎರೇಸೀಮೆ ಬದುಕು ಬರಹ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಜನಕ್ಕೆ ಸ್ವಪ್ರಜ್ಞೆ ಮತ್ತು ಸಾಮಾನ್ಯ ಜ್ಞಾನ ಎರಡು ಇಲ್ಲದಾಗಿದೆ. ಹಾಗಾಗಿ ನೋಡಿದೆಲ್ಲವನ್ನು ಒಪ್ಪಿಕೊಳ್ಳುವ, ಅನುಸರಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಶ್ನಿಸುವ, ಅಸತ್ಯವನ್ನು ಕಂಡಾಗ ಅಕ್ಷೇಪಿಸುವ ಕೆಲಸ ಮಾಡುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಸಾಹಿತ್ಯವೆಂದರೆ ನಾಲ್ಕು ಜನರಿಗೆ ಉಪಯೋಗಕ್ಕೆ ಬರಬೇಕು. ಬರೆದಿದ್ದೆಲ್ಲಾ ಸಾಹಿತ್ಯವಲ್ಲ. ನೋವವನ್ನು ಮರೆಸುವ, ನೋವಿನಲ್ಲಿಯೂ ನಗುವನ್ನು ತರಿಸುವಂತಹ ಸಾಹಿತ್ಯ ಹೆಚ್ಚು ದಿನ ಜನರ ಮದ್ಯ ಉಳಿಯಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಜಯವಿಭವಸ್ವಾಮಿ ಮಾತನಾಡಿ, ವೀರಶೈವ ಲಿಂಗಾಯಿತ ಸಮುದಾಯದ ಏಳಿಗೆಗಾಗಿ ದುಡಿದ ಹಿರಿಯ ಶರಣ ಶರಣೆಯರನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ದತ್ತಿ ಉಪನ್ಯಾಸ ಹಾಗೂ ಶರಣ ಸೇವಾ ಗೌರವ ದಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷದ ವಿಚಾರವಾಗಿದೆ ಎಂದರು.
ಶರಣ ಸಾಹಿತ್ಯ ಪರಿಷತ್ ತುಮಕೂರು ಜಿಲ್ಲಾಧ್ಯಕ್ಷ ಎಂ.ಜಿ.ಸಿದ್ದರಾಮಯ್ಯ, ಡಾ.ತುಳಜಪ್ಪ ರಾಜೇಶ್ವರಿ, ಉಪನ್ಯಾಸಕರಾದ ಎಂ.ಸುರೇಶ್, ಎಸ್.ಕುಮಾರಸ್ವಾಮಿ, ಜೋತಿ ಆನಂದ್, ಶಿವಲಿಂಗಮ್ಮ, ಪಾರ್ವತಿ ಟಿ.ಎಸ್.ಬಸವರಾಜು, ಎಸ್.ಶಿವಕುಮಾರ, ವನಜಾಕ್ಷಿ ಶಿವಕುಮಾರ, ಚಂದ್ರಶೇಖರಯ್ಯ ತಳವಾರನಹಳ್ಳಿ, ಮಂಗಳಾ ಮಹೇಶ್, ಹಂ.ಸಿ.ಕುಮಾರಸ್ವಾಮಿ, ಮಿಮಿಕ್ರಿ ಈಶ್ವರಯ್ಯ, ರಾಜಶೇಖರಯ್ಯ ಈಚನೂರು ಇದ್ದರು.


