2010ಕ್ಕೂ ಮೊದಲು ವಾರ್ಡ್ ಮರುವಿಂಗಡಣೆ ಮಾಡಿದಾಗ ಯಡಿಯೂರಪ್ಪ ಸರ್ಕಾರವಿತ್ತು. ನಾವು ಅಧಿಕಾರದಲ್ಲಿ ಇರಲಿಲ್ಲ. ಆದರೆ ಬಿಜೆಪಿ ಮುಖಂಡರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದು, ಸುಳ್ಳು ಹೇಳುವುದರಲ್ಲಿ ಬಿಜೆಪಿ ನಿಪುಣರು ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದರು.
2009ರಲ್ಲಿ ಮರುವಿಂಗಡಣೆ ಮಾಡಿ 198 ವಾರ್ಡ್ ಗಳನ್ನು ಮಾಡಿದ್ದು ಬಿಜೆಪಿಯವರು. ನಾವಲ್ಲ. ಜನರನ್ನು ತಪ್ಪುದಾರಿಗೆ ಎಳೆಯುವುದರಲ್ಲಿ ನಿಸ್ಸೀಮರು. ಅಧಿಕಾರಿಗಳು ಮಾಡಬೇಕಾದ ಮರುವಿಂಗಡಣೆಯನ್ನು ಬಿಜೆಪಿ ಶಾಸಕರು, ಸಂಸದರು ಕಚೇರಿಯಲ್ಲಿ ಆರ್.ಎಸ್.ಎಸ್ ಮುಖಂಡರು ತಮಗೆ ಬೇಕಾದ ರೀತಿಯಲ್ಲಿ ಮಾಡುತ್ತಿದ್ದಾರೆ. ನಾವು ತಪ್ಪು ಮಾಡಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ವಾರ್ಡ್ ವಿಂಗಡಣೆ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ಮನವಿ ಕೊಟ್ಟಿದ್ದೇವೆ. ಅವರ ನ್ಯಾಯಯುತ ಪ್ರಕ್ರಿಯೆ ಮಾಡಬೇಕು. ಅವರು ಪಕ್ಷಾತೀತರಾಗಿದ್ದು ತಮ್ಮ ಕರ್ತವ್ಯ ಸರಿಯಾಗಿ ಮಾಢಬೇಕು. ಇದನ್ನು ಸರಿಯಾಗಿ ಮಾಡದಿದ್ದರೆ ನಾವು ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ಬೆಂಗಳೂರು ಇವರ ಆಸ್ತಿಯಲ್ಲ. ಕ್ಷೇತ್ರ ಮರುವಿಂಗಡಣೆ ವಿರುದ್ಧ ನ್ಯಾಯಾಲಯದ ಮೊರೆ ಹೋಗುತ್ತೇವೆ. ವೈಜ್ಞಾನಿಕ ರೀತಿಯಲ್ಲಿ ಮರುವಿಂಗಡಣೆ ಮಾಡಲಿ. ಜನರು ಯಾರನ್ನು ಇಷ್ಟಪಡುತ್ತಾರೋ ಅವರನ್ನು ಆಯ್ಕೆ ಮಾಡುತ್ತಾರೆ. ಆದರೆ ಈ ರೀತಿ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬರಲು ಪ್ರಯತ್ನಿಸಬಾರದು ಎಂದು ಸಲಹೆ ನೀಡಿದರು.
ಬಿಜೆಪಿ ಆಯುಕ್ತರ ಬಳಿ ಸಣ್ಣ ದಾಖಲೆಯೂ ಇಲ್ಲ. ಬಿಜೆಪಿ ಕೊಟ್ಟ ಕರಡನ್ನೇ ಅಧಿಕಾರಿಗಳು ನೀಡುತ್ತಾರೆ. ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಬಿಜೆಪಿ ಹೇಳಿದಂತೆ ಕೇಳಬಾರದು ಎಂದು ಮನವಿ ಮಾಡುತ್ತೇನೆ ಎಂದು ರೆಡ್ಡಿ ತಿಳಿಸಿದರು.
ಬಿಜೆಪಿ ಅಜೆಂಡಾ ಗೊತ್ತಾಗಲಿ :
ಬಿಜೆಪಿ ಮತ್ತು ಆರ್.ಎಸ್.ಎಸ್ ಹಿಜಾಬ್ ವಿವಾದವನ್ನು ಹುಟ್ಟುಹಾಕಿದೆ. ಇದು ಜನಸಾಮಾನ್ಯರಿಗೆ ಗೊತ್ತಾಗುವುದಿಲ್ಲ. ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಅವಕಾಸ ನೀಡಲಿಲ್ಲ. ಕರಾವಳಿ ಭಾಗದಲ್ಲಿ ಸರ್ಕಾರದ ವಿರುದ್ದ ಜನ ನಿಂತರು. ಅದನ್ನು ಸರಿಪಡಿಸಲು ಹಿಜಾಬ್ ವಿಚಾರ ಎಳೆದು ತಂದಿದ್ದಾರೆ. ಬಿಜೆಪಿ ಹಿಡನ್ ಅಜೆಂಡಾವನ್ನು ಜನ ಅರ್ಥಮಾಡಿಕೊಂಡರೆ ಬಿಜೆಪಿಗೆ ಛೀಮಾರಿ ಹಾಕುತ್ತಾರೆ ಎಂದು ಹೇಳಿದರು.