ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತ ಜೆ.ಎಸ್. ಬಂದೂಕುವಾಲ ಶನಿವಾರ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ವಡೋದರ ಪ್ರತಾಪ್ ಗುಂಜ್ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ.
ಬಂದೂಕುವಾಲ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಒಂದು ವಾರದಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವೈದ್ಯ ಡಾ.ಮೊಹಮ್ಮದಿ ಹುಸೇನ್ ಹೇಳಿಕೆಯನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಮಧುಮೇಹ ಮತ್ತು ಹೃದಯ ಸಂಬಂದಿ ಕಾಯಿಲೆ ಇದ್ದರೂ ಅವರು ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದರು, ಹೀಗಾಗಿ ಅವರ ನಿವಾಸದಲ್ಲೇ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬಂದೂಕು ವಾಲ ಮೃತಪಟ್ಟಿದ್ದಾರೆ.
ಬಾಂಬೆ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಬಂದೂಕುವಾಲ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರು. 1981ರಲ್ಲಿ ವಡೋದರ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ಒಕ್ಕೂಟದ ಅಧ್ಯಕ್ಷರಾಗಿ ದಲಿತ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸಿದು.
ಮುಸ್ಲೀಂ ಸಮುದಾಯದ ಘಟ್ಟೋಲೈಸೇಶನ್ ಪರಿಕಲ್ಪನೆಯನ್ನು ವಿರೋಧಿಸಿದ್ದರು ಮತ್ತು ಕೋಮು ಪ್ರತಿಭಠನೆಗಳ ನಂತರ ನಾಗರಿಕ ಸಂಸ್ಥೆಯನ್ನು ರಚಿಸಿಕೊಂಡು ವಡೋದರದ ಕಲ್ಯಾಣನಗರ ಕೊಳೆಗೇರಿಗಳ 450 ಸ್ಥಳಾಂತರಗೊಂಡ ಮುಸ್ಲೀಂ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು 2015ರಿಂದ ಹೋರಾಟ ನಡೆಸಿದ ಹೆಗ್ಗಳಿಕೆ ಬಂದೂಕುವಾಲಾ ಅವರಿಗೆ ಸಲ್ಲುತ್ತದೆ.
2018ರಲ್ಲಿ ಬಂದೂಕು ವಾಲಾ ಆಗಿನ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿಗೆ ಪತ್ರ ಬರೆದು ಅಲ್ಲಿನ ಬೆಳವಣಿಗೆಗಳನ್ನು ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಗೆ ಹೋಲಿಸಿದರು. ವರ್ಣಭೇದ ನೀತಿಯು ದಕ್ಷಿಣ ಆಫ್ರಿಕಾದಲ್ಲಿ ಕೊನೆಯದಾಗಿ ಚಾಲ್ತಿಯಲ್ಲಿತ್ತು. ಇದರ ಪುನರಾವರ್ತನೆಯನ್ನು ಗುಜರಾತ್ ಬಯಸುತ್ತದೆಯೇ ಎಂದು ಬಂದೂಕುವಾಲ ಪ್ರಶ್ನಿಸಿದ್ದರು.
2002ರಲ್ಲಿ ಗುಜರಾತ್ ಗಲಭೆಗಳ ಸಮಯದಲ್ಲಿ ವಡೋದರದ ಸಾಮಾ ಪ್ರದೇಶದಲ್ಲಿ ಅವರ ಮನೆಗೆ ಬೆಂಕಿ ಹಚ್ಚಿದಾಗ ಬಂದೂಕುವಾಲ ಕುಟುಂಬ ಬೀದಿಗೆ ಬಿದ್ದಿತು. ಈ ಘಟನೆಯಿಂದ ಅವರ ಹೆಂಡತಿ ಆಘಾತಕ್ಕೆ ಈಡಾದರು. ಖಿನ್ನತೆಗೆ ಜಾರಿದರು. ನಂತರ ನಿಧನರಾದರು. ಬಂದೂಕುವಾಲ ನೆರೆಹೊರೆಯವರ ಮನೆಯಲ್ಲೇ ವಾಸಿಸಲು ಆಯ್ಕೆ ಮಾಡಿಕೊಂಡರು. ಹೋರಾಟವನ್ನು ಮುಂದುವರೆಸಿದರು.


