ಭಾರತೀಯ ಮಾಧ್ಯಮ ಕ್ಷೇತ್ರದಲ್ಲಿ ತನಿಖಾ ಪತ್ರಿಕೋದ್ಯಮದ ಪರಿಕಲ್ಪನೆ ಕಣ್ಮರೆಯಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಕಳವಳ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತ ಯು.ಸುಧಾಕರ ರೆಡ್ಡಿ ಬರೆದಿರುವ ಬ್ಲಡ್ ಸ್ಯಾಂಡರ್ಸ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಹಿಂದೆ ಪತ್ರಿಕೆಗಳು ಸಮಾಜದಲ್ಲಿ ಸಂಚಲನ ಸೃಷ್ಟಿಸುವ ಹಗರಣ ಬಯಲಿಗೆ ತರುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಅಂತಹ ಸ್ಫೋಟಕ ಕಥೆಗಳು ಅಷ್ಟೇನೂ ಇಲ್ಲ ಎಂದು ಹೇಳಿದರು.
ಆದರ್ಶವಿಲ್ಲದ ಮಹತ್ವಾಕಾಂಕ್ಷೆ ಅಪಾಯಕಾರಿ. ನಾನು ಇಂದಿನ ಮಾಧ್ಯಮದ ಕೆಲವು ಆಲೋಚನೆಗಳನ್ನು ಹಂಚಿಕೊಳ್ಳಲು ಸ್ವಾತಂತ್ರ್ಯ ತೆಗೆದುಕೊಳ್ಳುತ್ತಿದ್ದೇನೆ. ತನಿಖಾ ಪತ್ರಿಕೋದ್ಯಮದ ಪರಿಕಲ್ಪನೆಯು ದುರದೃಷ್ಟವಶಾತ್ ಮಾಧ್ಯಮದ ಕ್ಯಾನ್ವಾಸ್ನಿಂದ ಕಣ್ಮರೆಯಾಗುತ್ತಿದೆ. ಇದು ಕನಿಷ್ಠ ಭಾರತೀಯ ಸನ್ನಿವೇಶದಲ್ಲಾದರೂ ನಿಜ ಎಂದು ನ್ಯಾಯಮೂರ್ತಿ ರಮಣ ಹೇಳಿದರು.
“ನಾವು ಬೆಳೆಯುತ್ತಿರುವಾಗ, ದೊಡ್ಡ ಹಗರಣಗಳನ್ನು ಬಹಿರಂಗಪಡಿಸುವ ವೃತ್ತಪತ್ರಿಕೆಗಳನ್ನು ಕುತೂಹಲದಿಂದ ಎದುರು ನೋಡುತ್ತಿದ್ದೆವು. ಆ ದಿನಗಳಲ್ಲಿ ಪತ್ರಿಕೆಗಳು ನಮ್ಮನ್ನು ನಿರಾಶೆಗೊಳಿಸಲಿಲ್ಲ. ಈ ಹಿಂದೆ, ದೊಡ್ಡ ಹಗರಣಗಳು ಮತ್ತು ದುಷ್ಕೃತ್ಯಗಳ ಕುರಿತು ಪತ್ರಿಕೆಗಳ ವರದಿಗಳು ಗಂಭೀರ ಪರಿಣಾಮಗಳಿಗೆ ಕಾರಣವಾಗುವ ಸಂಚಲನವನ್ನು ಸೃಷ್ಟಿಸುವುದನ್ನು ನಾವು ನೋಡಿದ್ದೇವೆ ಎಂದು ತಿಳಿಸಿದರು.
ವ್ಯಕ್ತಿಗಳು ಮತ್ತು ಸಂಸ್ಥೆಗಳ ಸಾಮೂಹಿಕ ವೈಫಲ್ಯಗಳನ್ನು ಮಾಧ್ಯಮಗಳು ಎತ್ತಿ ತೋರಿಸಬೇಕಾಗಿದೆ. ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆ ಮಾಧ್ಯಮಗಳು ಜನರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದರು.