ಚುನಾವಣಾ ಪ್ರಚಾರ ಸಭೆಗಳಲ್ಲಿ ನಿರಂತರ ಸುಳ್ಳು ಹೇಳುತ್ತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿ ಪಕ್ಷದ ಮೂಲತತ್ವವನ್ನು ಎತ್ತಿಹಿಡಿದಿದ್ದಾರೆ. ನೂರು ಬಾರಿ ಸುಳ್ಳು ಹೇಳಿ ಅದನ್ನೇ ಸತ್ಯವೆಂದು ನಂಬಿಸುವುದು ಬಿಜೆಪಿಯ ಹುಟ್ಟುಗುಣ ಅಲ್ಲವೇ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾದ ಮನೆಗಳ ಕುರಿತು ಪ್ರಶ್ನೆ ಕೇಳುವ, ಸುಳ್ಳು ಹೇಳುವ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದೂ ಮಾಹಿತಿ ತರಿಸಿಕೊಳ್ಳಲು ಕಷ್ಟವೇ ಎಂದು ಪ್ರಶ್ನಿಸಿದ್ದಾರೆ.
2013 ರಿಂದ 2018ರ ಮಾರ್ಚ್ ವರೆಗೆ ನಮ್ಮ ಸರ್ಕಾರದ ಅವಧಿಯಲ್ಲಿ 15 ಲಕ್ಷ ಮನೆ ನಿರ್ಮಾಣ ಮಾಡಿದ್ದು 16,755 ಕೋಟಿ ವೆಚ್ಚ ಮಾಡಿದೆ. ಮಾಹಿತಿ ಬೇಕಿದ್ದರೆ ವಸತಿ ಸಚಿವ ಸೋಮಣ್ಣ ಅವರ ಕಚೇರಿಯಿಂದ ಲಿಖಿತ ಪ್ರತಿ ಕೊಟ್ಟಿದ್ದಾರೆ. ನಿಮಗೊಂದು ಪ್ರತಿ ತರಿಸಿಕೊಡಲೇ ಎಂದು ಮುಖ್ಯಮಂತ್ರಿ ಅವರನ್ನು ಕೆಣಕಿದ್ದಾರೆ.
ಗ್ರಾಮ ವಿಕಾಸ ಮತ್ತು ಮುಖ್ಯಮಂತ್ರಿ ಗಾಮ ವಿಕಾಸ ಯೋಜನೆ ಜಾರಿಗೆ ತಂದು ಇದರಡಿ 1750 ಕೋಟಿ ರೂ ನೀಡಿ 2000 ಗ್ರಾಮಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಇಂತಹ ಜನಪರ ಯೋಜನೆ ನಿಲ್ಲಿಸಿದ್ದು ನಿಮ್ಮದೇ ಸರ್ಕಾರ ಅಲ್ಲವೇ? ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 1350 ಕೋಟಿ ರೂ ನೀಡುವುದಾಗಿ ಯಡಿಯೂರಪ್ಪ ಆದೇಶ ಹೊರಡಿಸಿದ್ದರು. ಇದುವರೆಗೆ ಒಂದು ರೂ ಬಿಡುಗಡೆ ಮಾಡಿಲ್ಲ ಎಂದು ಟೀಕಿಸಿದರು.
ಗ್ರಾಮೀಣ ಕರ್ನಾಟಕದಲ್ಲಿ 3 ಕೋಟಿಗೂ ಹೆಚ್ಚು ಜನ ಬಿಪಿಎಲ್ ಕಾರ್ಡುದಾರರಿದ್ದಾರೆ. ಅದರಲ್ಲಿ ಒಂದು ಕೋಟಿ ಜನರಿಗೆ 100 ಮಾನವ ದಿನಗಳಷ್ಟು ಕೆಲಸ ಕೊಟ್ಟರೆ 100 ಕೋಟಿ ಮಾನವ ದಿನಗಳ ಗುರಿ ನೀಡಬೇಕಾಗುತ್ತದೆ. ಆದರೆ ರಾಜ್ಯಕ್ಕೆ 13 ಕೋಟಿ ಮಾನವ ದಿನಗಳ ಗುರಿ ನೀಡಲಾಗುತ್ತಿದೆ. ಇದು ಕೇವಲ 13 ಲಕ್ಷ ಜನರಿಗೆ ಮಾತ್ರ ಕೆಲಸ ಒದಗಿಸುತ್ತದೆ.
ಆದರೆ ಬೊಮ್ಮಾಯಿ ಅವರು ಸುಳ್ಳು ಹೇಳಿಕೊಂಡು ಓಡಾಡುವ ಬದಲು ದೆಹಲಿಗೆ ಹೋಗಿ ನರೇಗಾ ಯೋಜನೆಗೆ ಬೇಡಿಕೆ ಆಧಾರಿತ ಹೊಸ ಗುರಿ ನಿಗದಿ ಮಾಡಿಕೊಂಡು ಬರಲಿ ಎಂದು ಸವಾಲು ಹಾಕಿದ್ದಾರೆ.