ನಾಗಾಲ್ಯಾಂಡ್ ನಲ್ಲಿ ಭದ್ರತಾ ಪಡೆಗಳು ನಾಗರಿಕರ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿದೆ ಎಂದು ಅಪೆಕ್ಸ್ ಬುಡಕಟ್ಟು ಸಂಸ್ಥೆ ಹೇಳಿದೆ.
ಶನಿವಾರ ಸಂಜೆ ಪಿಕಪ್ ವ್ಯಾನ್ ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಕಲ್ಲಿದ್ದಲು ಗಣಿ ಕಾರ್ಮಿಕರನ್ನು ನಿಷೇಧಿತ ಸಂಘಟನೆ ಯಂಗ್ ಅಂಗ್ ಬಣಕ್ಕೆ ಸೇರಿದ ದಂಗೆಕೋರರು ಎಂದು ಸೇನಾ ಸಿಬ್ಬಂದಿ ತಪ್ಪಾಗಿ ಭಾವಿಸಿ ಗುಂಡಿನ ದಾಳಿ ನಡೆಸಿ ಹಲವು ಮಂದಿ ನಾಗರಿಕರನ್ನು ಹತ್ಯೆ ಮಾಡಿದ್ದರು.
ಗಣಿ ಕಾರ್ಮಿಕರು ಮನೆಗೆ ತಲುಪದೇ ಇದ್ದಾಗ ಅವರನ್ನು ಹುಡುಕಿಕೊಂಡು ಹೋದ ಗ್ರಾಮಸ್ಥರು ಸೇನಾ ವಾಹನಗಳನ್ನು ಸುತ್ತುವರೆದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಓರ್ವ ಯೋಧ ಮೃತಪಟ್ಟಿದ್ದರು. ವಾಹನಗಳು ಸುಟ್ಟು ಹೋದ ಘಟನೆ ನಡೆದಿತ್ತು.
ಮೂರು ದಿನಗಳ ಬಳಿಕ ಮೃತ ಗಣಿ ಕಾರ್ಮಿಕರ ಸಂಖ್ಯೆ 17ಕ್ಕೆ ಏರಿದೆ ಎಂದು ಅಪೆಕ್ಸ್ ಬುಡಕಟ್ಟು ಸಂಸ್ಥೆ ಹೇಳಿದೆ.
ಪ್ರಭಾವಿ ನಾಗಾ ವಿದ್ಯಾರ್ಥಿಗಳ ಒಕ್ಕೂಟ (ಎನ್ಎಸ್ಎಫ್) ಐದು ದಿನಗಳ ಶೋಕಾಚರಣೆ ಘೋಷಿಸಿದ್ದು, ಈ ಅವಧಿಯಲ್ಲಿ ಯಾವುದೇ ಆಚರಣೆಯಲ್ಲಿ ಭಾಗವಹಿಸದಂತೆ ಬುಡಕಟ್ಟು ಜನಾಂಗದವರಿಗೆ ಮನವಿ ಮಾಡಿದೆ.


