ಅಮಾನತುಗೊಂಡಿರುವ 12 ರಾಜ್ಯಸಭಾ ಸದಸ್ಯರಿಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಸಂಸದರ ಅಮಾನತು ಹಿಂಪಡೆಯುವವರೆಗೆ ಸಂಸದ್ ಟಿವಿಯಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸುವುದನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ.
“ನಮ್ಮ ರಾಜಕೀಯ ಭಿನ್ನಾಭಿಪ್ರಾಯಗಳು ಎಷ್ಟೇ ಇರಲಿ, ಸಂಸತ್ ಸದಸ್ಯರಾದ ನಾವು ವಿವಿಧ ಸಂಸದೀಯ ಸಂಸ್ಥೆಗಳಲ್ಲಿ ಸಂಪೂರ್ಣವಾಗಿ ಭಾಗವಹಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ತಿರುವನಂತಪುರ ಸಂಸದ ಶಶಿ ತರೂರ್ ಹೇಳಿದ್ದಾರೆ.

“ಹಿಂದಿನ ಅಧಿವೇಶನದಲ್ಲಿ ಮಾಡಿದ ಕ್ರಮಗಳಿಗಾಗಿ ಉಚ್ಚಾಟಿಸಲಾದ 12 ಸಂಸದರ ಅಮಾನತು ಸರಿಯಲ್ಲ. ಸಂಸದರ ಅಮಾನತು ಹಿಂಪಡೆಯುವವರೆಗೆ ಸಂಸದ್ ಟಿವಿಯಲ್ಲಿ ಟು ದಿ ಪಾಯಿಂಟ್ ಟಾಕ್ ಶೋ ಹೋಸ್ಟಿಂಗ್ ಮಾಡುವುದನ್ನು ಸ್ಥಗಿತಗೊಳಿಸಿದ್ದೇನೆ ಎಂದು ತಿಳಿಸಿದ್ದಾರೆ.
ಅಮಾನತುಗೊಂಡಿರುವ 12 ರಾಜ್ಯಸಭಾ ಸಂಸದರ ಪೈಕಿ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಸಂಸದ್ ಟಿವಿಯ “ಮೇರಿ ಕಹಾನಿ” ಕಾರ್ಯಕ್ರಮದ ನಿರೂಪಕ ಸ್ಥಾನದಿಂದ ಹಿಂದೆ ಸರಿದ ಒಂದು ದಿನದ ಬಳಿಕ ಶಶಿ ತರೂರ್ ಅವರಿಂದ ಈ ಹೇಳಿಕೆ ಬಂದಿದೆ.
ಹಿಂದಿನ ಅಧಿವೇಶನದಲ್ಲಿನ ಅಶಿಸ್ತಿನ ನಡವಳಿಕೆಗಾಗಿ ಕಾಂಗ್ರೆಸ್ ಪಕ್ಷದ ಆರು, ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನೆಯ ತಲಾ ಇಬ್ಬರು ಮತ್ತು ಸಿಪಿಐ ಮತ್ತು ಸಿಪಿಐ(ಎಂ) ನ ತಲಾ ಒಬ್ಬರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ.


