ಪಂಜಾಬ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನನ್ನನ್ನು ಸೆಳೆಯಲು ಬಿಜೆಪಿ ಹಿರಿಯ ನಾಯಕರೊಬ್ಬರು ಕೇಂದ್ರ ಸಚಿವ ಸ್ಥಾನ ನೀಡುವ ಮತ್ತು ಹಣದ ಆಮಿಷವೊಡ್ಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಸಂಸದ ಹಾಗೂ ಪಕ್ಷದ ಪಂಜಾಬ್ ಅಧ್ಯಕ್ಷ ಭಗವಂತ್ ಮಾನ್ ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮಾನ್, ಪಂಜಾಬ್ನಲ್ಲಿ ಹಲವು ಎಎಪಿ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಮತ್ತು ಅವರಿಗೂ ಇದೇ ರೀತಿಯ ಆಮಿಷಗಳನ್ನು ಒಡ್ಡಲಾಗಿದೆ ಎಂದು ಆರೋಪಿಸಿದರು.
“ಬಿಜೆಪಿಯ ಹಿರಿಯ ನಾಯಕರೊಬ್ಬರು ನನ್ನನ್ನು ಸಂಪರ್ಕಿಸಿ ಬಿಜೆಪಿಗೆ ಸೇರಲು ಎಷ್ಟು ಹಣ ತೆಗೆದುಕೊಳ್ಳುತ್ತೀರಿ ಎಂದು ಕೇಳಿದರು. ನಾನು ಎಎಪಿಯ ಏಕೈಕ ಸಂಸದ, ನಾನು ಬಿಜೆಪಿಗೆ ಸೇರುವುದರಿಂದ ಪಕ್ಷಾಂತರ ನಿಷೇಧ ಕಾನೂನು ಅಡ್ಡಿಬರುವುದಿಲ್ಲ ಎಂದರು. ಬಿಜೆಪಿ ಸೇರಿದರೆ ಕೇಂದ್ರದಲ್ಲಿ ನನ್ನ ಆಯ್ಕೆಯ ಕ್ಯಾಬಿನೆಟ್ ಸ್ಥಾನ ನೀಡಲಾಗುವುದು ಎಂದು ಹಿರಿಯ ನಾಯಕರು ನನಗೆ ಹೇಳಿದರು.
ಪಂಜಾಬ್ ಸಂಗ್ರೂರ್ನಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಮಾನ್, ತಾನು “ಮಿಷನ್ನಲ್ಲಿದ್ದೇನೆ ಮತ್ತು ಕಮಿಷನ್ ಅಲ್ಲ” ಎಂದು ಹೇಳುವ ಮೂಲಕ ಪ್ರಸ್ತಾಪ ನಿರಾಕರಿಸಿದ್ದೇನೆ ಎಂದು ಹೇಳಿದರು.
ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ 700 ಕ್ಕೂ ಹೆಚ್ಚು ರೈತರು ಸಾನ್ನಪ್ಪಿದರು. ಇದರಿಂದ ನೊಂದಿರುವ ರೈತರು ಬಿಜೆಪಿ ನಾಯಕರಿಗೆ ಹಳ್ಳಿ ಪ್ರವೇಶಿಸಲು ಬಿಡುತ್ತಿಲ್ಲ. ಪಂಜಾಬ್ನ ಭವಿಷ್ಯವನ್ನು ಮನಸ್ಸಿನಲ್ಲಿಟ್ಟುಕೊಂಡಿರುವ ಯಾರೂ ಲಖಿಂಪುರ ಖೇರಿಯಲ್ಲಿ ಹಲವಾರು ಜನರ ಸಾವಿಗೆ ಕಾರಣವಾದ ಪಕ್ಷವನ್ನು ಸೇರುವುದಿಲ್ಲ,” ಎಂದು ಅವರು ಹೇಳಿದರು.
“ಬಿಜೆಪಿಯು ಮಧ್ಯಪ್ರದೇಶ, ಕರ್ನಾಟಕ, ಗೋವಾ ಮತ್ತು ಮೇಘಾಲಯದಂತಹ ಇತರ ರಾಜ್ಯಗಳಲ್ಲಿ ಇದನ್ನು ಮಾಡಿದೆ. ಪಂಜಾಬ್ನಲ್ಲೂ ಇದನ್ನು ಮಾಡಬಹುದು. ಹಣಬಲದ ಮೂಲಕ ಪಕ್ಷಗಳನ್ನು ಒಡೆಯಲು ಪ್ರಯತ್ನಿಸಿದರೆ ಪ್ರಜಾಪ್ರಭುತ್ವಕ್ಕೆ ಇದು ಮಾರಕ ಎಂದು ಆರೋಪಿಸಿದರು.


