ನಾಗಾಲ್ಯಾಂಡ್ ಉಪಮುಖ್ಯಮಂತ್ರಿ ಕಾರ್ಯವೈಖರಿಯಿಂದ ಬೇಸರಗೊಂಡಿರುವ 12 ಮಂದಿ ಶಾಸಕರು ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲು ತೀರ್ಮಾನಿಸಿದ್ದಾರೆ.
ಮೇಘಾಲಯದಲ್ಲಿ 12 ಮಂದಿ ಕಾಂಗ್ರೆಸ್ ಶಾಸಕರು ತಮ್ಮ ನಿಷ್ಠೆ ಬದಲಿಸಿ ಟಿಎಂಸಿ ಸೇರ್ಪಡೆಯಾದಂತೆ ನಾಗಾಲ್ಯಾಂಡ್ ನಲ್ಲಿ ಆಡಳಿತಾರೂಢ ಬಿಜೆಪಿಯಿಂದ ಹೊರನಡೆಯಲು ಶಾಸಕರು ಸಿದ್ದತೆ ನಡೆಸಿದ್ದಾರೆ.
ರಾಜ್ಯದ 12 ಮಂದಿ ಭಿನ್ನಮತೀಯ ಶಾಸಕರು ಕೋಲ್ಕತ್ತಾದಲ್ಲಿ ಮೊಕ್ಕಾಂ ಹೂಡಿದ್ದು ಟಿಎಂಸಿ ನಾಯಕತ್ವವನ್ನು ಭೇಟಿ ಮಾಡಲಿದ್ದಾರೆ. ವಿಧಾನಸಭೆಯ ಮಾಜಿ ಉಪಸಭಾಪತಿ ನೇತೃತ್ವದಲ್ಲಿ ಅವರು ಶೀಘ್ರವೇ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ನಾಗಾಲ್ಯಾಂಡ್ ಬಿಜೆಪಿಯ ಮೂಲಗಳ ಪ್ರಕಾರ, ಹಾಲಿ ಶಾಸಕರಲ್ಲದ ಈ ನಾಯಕರು ವಿಶೇಷವಾಗಿ ಉಪಮುಖ್ಯಮಂತ್ರಿ ವೈ ಪ್ಯಾಟನ್ ಅವರ ಕಾರ್ಯವೈಖರಿಯಿಂದ ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
“ಈ ನಾಯಕರ ಗುಂಪು ಕೋಲ್ಕತ್ತಾದಲ್ಲಿದೆ ಎಂದು ನಮಗೆ ತಿಳಿದಿದೆ. ಅವರು ಪಕ್ಷದ ನಾಯಕತ್ವದಲ್ಲಿ, ವಿಶೇಷವಾಗಿ ಉಪಮುಖ್ಯಮಂತ್ರಿ ಜೊತೆ ಉತ್ತಮ ಸಂಬಂಧ ಹೊಂದಿರಲಿಲ್ಲ ಎಂದು ಹೇಳಲಾಗಿದೆ.
ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ಟು ಶಾಸಕರಿದ್ದರೂ ಅದನ್ನು “ವಿರೋಧವಿಲ್ಲದ” ಸರ್ಕಾರವನ್ನಾಗಿ ಮಾಡಿ ಬಿಜೆಪಿ ನಾಯಕರ ಒಂದು ಗುಂಪು ಎನ್ಪಿಎಫ್ನೊಂದಿಗೆ ನಿಕಟ ಬಾಂಧವ್ಯ ಇಟ್ಟುಕೊಂಡು ಎನ್ಡಿಪಿಪಿ ನಾಯಕ ಮತ್ತು ಮುಖ್ಯಮಂತ್ರಿ ನೆಫಿಯು ರಿಯೊ ಅವರನ್ನು ಅಧಿಕಾರದಿಂದ ಹೊರಹಾಕುವ ಬೆದರಿಕೆ ಹಾಕಿದೆ. ಆದ್ದರಿಂದ, ಅವರು ಎನ್ಪಿಎಫ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.


