ಕಾಂಗ್ರೆಸ್ ಪಕ್ಷದ ವಿರುದ್ಧ ಪದೇ ಪದೇ ಖ್ಯಾತೆ ತೆಗೆಯುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಶಿವಸೇನೆ ವಾಗ್ದಾಳಿ ನಡೆಸಿದೆ. ಪಕ್ಷದ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ತೃಣಮೂಲ ಕಾಂಗ್ರೆಸ್ ತೆಗೆದುಕೊಳ್ಳುತ್ತಿರುವ ನಿಲುವುಗಳು ಬಿಜೆಪಿ ಮತ್ತು ಫ್ಯಾಸಿಸ್ಟ್ ಶಕ್ತಿಗಳನ್ನು ಬಲಪಡಿಸುವಂತಿದೆ ಎಂದು ಆರೋಪಿಸಿದೆ.
ಯುಪಿಎ ಬಯಸದವರು ಹಿಂದೆ ಮಾತನಾಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದು ಸಾರ್ವಜನಿಕವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಶಿವಸೇನೆ ಒತ್ತಾಯಿಸಿದೆ.
ಬಿಜೆಪಿ ವಿರುದ್ಧ ಹೋರಾಡುತ್ತಿರುವ ಜನರು ಸಹ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಬೇಕು ಎಂದು ಬಯಸಿದರೆ ಇದೊಂದು ದೊಡ್ಡ ಬೆದರಿಕೆಯಾಗುತ್ತದೆ. ಪ್ರತಿಪಕ್ಷಗಳ ನಡುವೆ ಒಗ್ಗಟ್ಟಿಲ್ಲ. ಹೀಗಿದ್ದಾಗ ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿಯನ್ನು ರೂಪಿಸಲು ಸಾಧ್ಯವಿಲ್ಲ ಎಂದು ಅದು ತಿಳಿಸಿದೆ.
ಮಮತಾ ಬ್ಯಾನರ್ಜಿ ಅವರು ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಈಗ ಯುಪಿಎ ಇಲ್ಲ ಎಂದು ಹೇಳಿದ್ದರು. ಜೊತೆಗೆ ಟಿಎಂಸಿ ಮುಖವಾಣಿ ಜಾಗೋ ಬಾಂಗ್ಲಾ’ದಲ್ಲಿ ಡೀಪ್ ಫ್ರೀಜರ್ ಆಗಿಹೋಗಿದೆ ಎಂದು ಯುಪಿಎ ಅನ್ನು ಟೀಕಿಸಿತ್ತು.
ಪ್ರಧಾನಿ ಮೋದಿ ವಿರುದ್ಧ ವಿರೋಧ ಪಕ್ಷವಾಗಿ ಹೊರಹೊಮ್ಮಿರುವುದು ಮಮತ ಬ್ಯಾನರ್ಜಿಯೇ ಹೊರತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಲ್ಲ ಎಂದು ಹೇಳಿತ್ತು. ಇದಕ್ಕೆ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಟೀಕೆ ವ್ಯಕ್ತಪಡಿಸಿದೆ.
ಬಿಜೆಪಿಗೆ ಪ್ರಬಲ ಪರ್ಯಾಯ ರಚಿಸುವ ಬಗ್ಗೆ ಒಮ್ಮತವಿದೆ. ಆದರೆ ಯಾರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. ಯಾರನ್ನು ದೂರ ಇಡಬೇಕು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕನಿಷ್ಠ ಪಕ್ಷ ಒಗ್ಗೂಡುವ ಬಗ್ಗೆ ನಿರ್ಧಾರವಾಗಬೇಕು ಎಂದು ಶಿವಸೇನೆ ಹೇಳಿದೆ.


