ಅನಾರೋಗ್ಯದಿಂದ ನರಳುತ್ತಿದ್ದ ಹಾಸ್ಯ ನಟ ಶಿವರಾಂ ಇಂದು ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. 1965ರಲ್ಲಿ ‘ಬೆರೆತ ಜೀವ’ ಕನ್ನಡ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ ಶಿವರಾಂ 2021ವರೆಗೆ ಸುಮಾರು 90ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಸೆಳೆದಿದ್ದರು.
1972ರಲ್ಲಿ ರಾಜ್ ಕುಮಾರ್ ಮತ್ತು ಭಾರತಿ ಅಭಿನಯದ ಹೃದಯ ಸಂಗಮ ಚಿತ್ರವನ್ನು ನಿರ್ದೇಶಿಸಿ ನಿರ್ದೇಶಕರಾಗಿ ಮತ್ತು ಪ್ರಸಿದ್ದ ನಿರ್ದೇಶಕರಾದ ಕೆ.ಎಸ್.ಎಲ್.ಸ್ವಾಮಿ, ಗೀತಪ್ರಿಯ, ಸಿಂಗೀತಮ್ ಶ್ರೀನಿವಾಸರಾವ್, ಪುಟ್ಟಣ್ಣ ಕಣಗಾಲ್ ಅವರ ಜೊತೆ ಸಹನಿರ್ದೆಶಕರಾಗಿಯೂ ಮತ್ತು ಪ್ರಸಿದ್ಧ ಛಾಯಾಗ್ರಾಹಕ ಬೊಮನ್ ಡಿ. ಇರಾನಿ ಜೊತೆ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.
ಶರಪಂಜರ, ನಾಗರಹಾವು, ಶುಭಮಂಗಳ ಚಿತ್ರಗಳಲ್ಲಿನ ಶಿವರಾಂ ನಟನೆ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದೆ. ಚಲಿಸುವ ಮೋಡಗಳು, ಶ್ರಾವಣ ಬಂತು, ಹಾಲುಜೇನು, ಹೊಂಬಿಸಿಲು, ಹೊಸಬೆಳಕು, ಗುರು ಶಿಷ್ಯರು, ಸಿಂಹದ ಮರಿ ಸೈನ್ಯ, ಮಕ್ಕಳ ಸೈನ್ಯ ಚಿತ್ರಗಳಲ್ಲಿ ಹಾಸ್ಯ ನಟನಾಗಿ ಉತ್ತಮ ಅಭಿನಯ ಮಾಡಿದ್ದಾರೆ.

1970, 1980 ಮತ್ತು 2000ನೇ ದಶಕದಲ್ಲಿ ಚಿತ್ರ ನಿರ್ದೇಶನ ಮಾಡಿದ ಎಲ್ಲಾ ನಿರ್ದೇಶಕರ ಅಡಿಯಲ್ಲೂ ಶಿವರಾಂ ಕೆಲಸ ಮಾಡಿದ್ದಾರೆ. ಗೆಜ್ಜೆಪೂಜೆ, ಉಪಾಸನೆ, ಡಾ.ರಾಜ್ ಕುಮಾರ್ ಅಭಿನಯದ ನಾನೊಬ್ಬ ಕಳ್ಳ, ಡ್ರೈವರ್ ಹನುಮಂತು, ರಜಿನಿಕಾಂತ್ ಅಭಿನಯದ ತಮಿಳು ಚಿತ್ರ ಧರ್ಮ ದೊರೈ, ಶಿವರಾಜ್ ಕುಮಾರ್ ಅಭಿನಯದ ಬಹಳ ಚೆನ್ನಾಗಿದೆ’ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.
2013ರಲ್ಲಿ ಪದ್ಮಭೂಷಣ ಡಾ. ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ, ಡಾ.ರಾಜ್ ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿಗಳು ಶಿವರಾಂ ಅವರಿಗೆ ಲಭಿಸಿವೆ.
ಹಾಸ್ಯ ನಟ ಶಿವರಾಂ ನಿಧನ ಸುದ್ದಿ ತಿಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೃತ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.


