ಕೇಂದ್ರ ಮಾಜಿ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರ “ಸನ್ ರೈಸ್ ಓವರ್ ಅಯೋಧ್ಯಾ: ನೇಷನ್ ವುಡ್ ಇನ್ ಅವರ್ ಟೈಮ್ಸ್” ಹೊಸ ಪುಸ್ತಕ ಪ್ರಕಾಶನ, ಪ್ರಸಾರ, ಮಾರಾಟ ಮತ್ತು ಖದೀಸುವುದನ್ನು ನಿಷೇಧಿಸಬೇಕೆಂದು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಹೊಸ ಪುಸ್ತಕದಲ್ಲಿ ಹಿಂದುತ್ವವನ್ನು ಇಸ್ಲಾಮಿಕ್ ಸ್ಟೇಟ್ ಮತ್ತು ಬೊಕೊ ಹರಾಮ್ ಜೊತೆ ಹೋಲಿಕೆ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಂತ್ ವರ್ಮಾ ‘ಜನರಿಗೆ ಪುಸ್ತಕ ಇಷ್ಟವಾಗದಿದ್ದರೆ ಅವರು ಅದನ್ನು ಖರೀದಿಸದೇ ಇರಲು ಅವಕಾಶವಿದೆ ಎಂದು ಹೇಳಿದರು.
‘ಲೇಖಕರೊಂದಿಗೆ ನಿಮಗೆ ಒಪ್ಪಿಗೆ ಇಲ್ಲದಿದ್ದರೆ, ಅದನ್ನು ಓದಬೇಡಿ. ಕೆಟ್ಟ ಲೇಖಕ ಎಂಬುದನ್ನು ಜನರಿಗೆ ಹೇಳಿ, ಇದಕ್ಕಿಂತ ಉತ್ತಮ ವಾದದ್ದನ್ನು ಓದುವಂತೆ ಹೇಳಿ’ ಎಂದು ನ್ಯಾಯಮೂರ್ತಿಗಳು ಅರ್ಜಿದಾರರಿಗೆ ಹೇಳಿದರು.
ವಕೀಲ ರಾಜ್ ಕಿಶೋರ್ ಚೌಧರಿ ಅರ್ಜಿದಾರರ ಪರ ಹಾಜರಾಗಿ ಖುರ್ಷಿದ್ ಅವರ ಪುಸ್ತಕ ದೇಶದಲ್ಲಿ ಕೋಮುಭಾವನೆ ಕೆರಳಿಸುತ್ತದೆ ಮತ್ತು ಈಗಾಗಲೇ ಈ ಪುಸ್ತಕದಿಂದ ಹಿಂಸೆಯು ನಡೆದಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಲೇಖಕರ ನೈನಿತಾಲ್ ನಲ್ಲಿರುವ ಮನೆ ಮೇಲೆ ದಾಳಿ ನಡೆದಿದೆ. ನಂತರ ಇಂತಹ ಘಟನೆಗಳು ಮರುಕಳಿಸಿಲ್ಲ. ಆದರೆ ನಡೆಯುವ ಸಾಧ್ಯತೆ ಇದೆ ಎಂದು ಚೌಧರಿ ನ್ಯಾಯಾಲಯದ ಮುಂದೆ ಹೇಳಿದರು. ಸಂವಿಧಾನದ ಆರ್ಟಿಕಲ್ 19 ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕೆಲ ನಿರ್ಬಂಧಗಳನ್ನು ವಿಧಿಸಿದೆ. ಶಾಂತಿಭಂಗ ತರುವಂತಿದ್ದರೆ ನಿಷೇಧಿಸಬಹುದು ಎಂದರು.
ಚೌಧರಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ವರ್ಮಾ, ಖುರ್ಷಿದ್ ಅವರು ಸಾರ್ವಜನಿಕ ವ್ಯಕ್ತಿ. ಈ ಪ್ರಕರಣದಲ್ಲಿ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ನ್ಯಾಯಾಲಯ ಭಾವಿಸುವುದಿಲ್ಲ ಎಂದು ತಿಳಿಸಿದರು. ಜನರು ಹೀಗೆ ಭಾವಿಸಿದರೆ ನಾವೇನು ಮಾಡಬೇಕು, ಓದುಗರಿಗೆ ಆ ಪ್ಯಾರ ಇಷ್ಟವಾಗದಿದ್ದರೆ ಅವರು ಆ ಪಾಠವನ್ನೇ ಕೈಬಿಡಬೇಕು. ಅವರ ಭಾವನೆಗಳಿಗೆ ಧಕ್ಕೆ ಆಗುವಂತೆ ಇದ್ದರೆ ಕಣ್ಣನ್ನು ಮುಚ್ಚಿಕೊಳ್ಳಬೇಕು’ ಎಂದು ಹೇಳಿದರೆಂದು ಬಾರ್ ಅಂಡ್ ಬೆಂಚ್ ತಿಳಿಸಿದೆ.
ನ್ಯಾಯಮೂರ್ತಿ ವರ್ಮಾ ಇನ್ನೇನಾದರೂ ಆಕ್ಷೇಪ ಇದೆಯಾ ಎಂದು ವಕೀಲ ಚೌಧರಿ ಅವರನ್ನು ಕೇಳಿ ಅರ್ಜಿಯನ್ನು ವಜಾಗೊಳಿಸಿದರು.


