ಹಿಂದುಳಿದ ವರ್ಗಗಳ ಸಮುದಾಯದ ಜಾತಿ ಆಧಾರಿತ ಜನಗಣತಿ ಮಾಡಲು ಆಂಧ್ರಪ್ರದೇಶದ ವಿಧಾನಸಭೆ ನಿರ್ಣಯವನ್ನು ಬುಧವಾರ ಅಂಗೀಕರಿಸಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಸಿ.ಎಚ್.ವೇಣುಗೋಪಾಲಕೃಷ್ಣ ಮಂಡಿಸಿದ ನಿರ್ಣಯಕ್ಕೆ ವಿಧಾನಸಭೆ ಅಂಗೀಕಾರ ನೀಡಿತು.
ನಿರ್ಣಯದ ಮೇಲೆ ಮಾತನಾಡಿದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ, ಹಿಂದುಳಿದ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಜಾತಿಗಣತಿ ಅಗತ್ಯವಿದೆ. ವೈಎಸ್ಆರ್ ಕಾಂಗ್ರೆಸ್ ಹಿಂದುಳಿದವ ವರ್ಗಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಸೃಷ್ಟಿಯಾದ ಒಟ್ಟು 6.3 ಲಕ್ಷ ಉದ್ಯೋಗಗಳಲ್ಲಿ ಶೇಕಡ 75ರಷ್ಟು ಉದ್ಯೋಗಗಳು ಬಿಸಿಗಳಿಗೆ ನೀಡಿದೆ ಎಂದು ಒತ್ತಿ ಹೇಳಿದರು.
2021ರ ಸಾಮಾನ್ಯ ಜನಗಣತಿಯನ್ನು ನಡೆಸುವಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರ ಜೊತೆಗೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಸಮುದಾಯದ ಜಾತಿವಾರು ಜನಗಣತಿ ನಡೆಸಬೇಕೆಂದು ಶಾಸಕಾಂಗ ಸಭೆಯು ತನ್ನ ನಿರ್ಣಯದಲ್ಲಿ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ ಎಂದು ಡೆಕನ್ ಕ್ರಾನಿಕಲ್ ವರದಿ ಮಾಡಿದೆ.
ಹಿಂದುಳಿದ ವರ್ಗಗಳ ಸಮುದಾಯದ ಜಾತಿಜನಗಣತಿಯಿಂದ ಅವರ ಕಲ್ಯಾಣ, ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಉತ್ತಮ ನೀತಿಗಳನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂದು ಮುಖ್ಯಮಂತ್ರಿ ಜಗನ್ ಸಮರ್ಥಿಸಿಕೊಂಡರು.
1931ರಲ್ಲಿ ಜಾತಿವಾರು ಜನಗಣತಿ ನಡೆದಿತ್ತು. ಅಂದಿನಿಂದ 90 ವರ್ಷಗಳು ಕಳೆದರೂ ವೈಜ್ಞಾನಿಕ ದತ್ತಾಂಶ ಸಂಗ್ರಹಿಸಲು ಆಗಿಲ್ಲ ಇದು ಹಿಂದುಳಿದ ವರ್ಗಗಳ ಹಿತಾಸಕ್ತಿ ಮತ್ತು ಆಕಾಂಕ್ಷೆಗಳನ್ನು ಪೂರೈಸುವಲ್ಲಿ ಅಡಚಣೆಯಾಗಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳು ಸಂಕಷ್ಟದಲ್ಲಿವೆ. ಹಾಗಾಗಿ ಅವರಿಗೆ ಸರ್ಕಾರದ ಕಾರ್ಯಕ್ರಮಗಳನ್ನು ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಿಂಹಪಾಲು ನೀಡುವ ಗುರಿಯನ್ನು ಹೊಂದಿವೆ. ಕಲ್ಯಾಣದ ಜೊತೆಗೆ ರಾಜ್ಯ ಸರ್ಕಾರದ ಹುದ್ದೆಗಳು, ಉದ್ಯೋಗಗಳು ಮತ್ತು ಯೋಜನೆಗಳಲ್ಲಿ ಇದರಿಂದ ಹಿಂದುಳಿದವರಿಗೆ ಪ್ರಮುಖ ಪಾಲು ಸಿಗಲಿದೆ ಎಂದು ತಿಳಿಸಿದರು.