ಬಹುಸಂಖ್ಯಾತರ ಆಹಾರದ ಬಗ್ಗೆ ಮಾತನಾಡಿರುವ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದುಪಡಿಸಬೇಕು. ಅವರ ವಿರುದ್ಧ ನಡೆಯುತ್ತಿರುವ ತೇಜೋವಧೆ ನಿಲ್ಲಬೇಕು ಎಂದು ಆಗ್ರಹಿಸಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಹಂಸಲೇಖ ದೇಶದ ತಳಸಮುದಾಯಗಳು ಅನುಭವಿಸುತ್ತಿರುವ ನೋವು, ಸಂಕಟವನ್ನು ಜನರ ಮುಂದಿಟ್ಟಿದ್ದಾರೆ. ಸ್ವತಃ ಅವರೇ ಅನುಭವಿಸಿದ ಅಸ್ಪೃಶ್ಯತೆಯನ್ನು ಹೇಳಿದ್ದಾರೆ. ಇಂತಹ ನೋವನ್ನು ಎಷ್ಟು ಅನುಭವಿಸಬೇಕು ಎಂದು ಪ್ರಶ್ನಿಸಿದ್ದಾರೆ. ಆದರೆ ಯಾರ ತೇಜೋವಧೆ ಮಾಡಿಲ್ಲ ಎಂದು ಒಕ್ಕೂಟದ ಅಧ್ಯಕ್ಷ ಕೊಟ್ಟ ಶಂಕರ್ ಹೇಳಿದ್ದಾರೆ.
ಜಾತಿ ಹೋಗಲಾಡಿಸುವ ಬೂಟಾಟಿಕೆ ನಾಟಕವಾಡುವ ಮುಖಂಡರ ದಲಿತ ಮನೆಗಳಿಗೆ ಭೇಟಿ ನೀಡಿ ಸಹಪಂಕ್ತಿ ಭೋಜನ ಮಾಡುವುದರಿಂದ ಜಾತಿಯತೆ ಹೋಗುವುದಿಲ್ಲ ಎಂಬ ಸತ್ಯವನ್ನು ಹಂಸಲೇಖ ನುಡಿದಿದ್ದಾರೆ. ಇದನ್ನು ಸಹಿಸಲಾರದ ಮನುವಾದಿ ಮನಸ್ಸುಗಳು ಹಂಸಲೇಖರ ಮೇಲೆ ಒತ್ತಡ ಹಾಕಿ ಕ್ಷಮೆ ಕೇಳುವಂತೆ ಮಾಡಿದರು. ಠಾಣೆಗಳಲ್ಲಿ ದೂರು ದಾಖಲಿಸಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ದೂರಿದ್ದಾರೆ.

ಹಂಸಲೇಖರ ವಿರುದ್ಧ ಹಾಕಿರುವ ಎಫ್ಐಆರ್ ರದ್ದುಗೊಳಿಸದೇ ಹೋದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ. ಜೊತೆಗೆ ಬಹುಸಂಖ್ಯಾತರ ಆಹಾರ ಪದ್ಧತಿ ಬಗ್ಗೆ ಅವಹೇಳನ ಮಾಡಿರುವ ಮತ್ತು ಹಂಸಲೇಖ ವಿರುದ್ಧ ದೂರು ದಾಖಲಿಸಿರುವವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಪ್ರತಿದೂರು ದಾಖಲಿಸಬೇಕಾಗುತ್ತದೆ ಎಂದು ಒಕ್ಕೂಟದ ತಾಜುದ್ದೀನ್ ಷರೀಫ್, ಅತೀಕ್ ಅಹಮದ್, ಸಿ.ಭಾನುಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಹಂಸಲೇಖರ ಮೇಲಿನ ವೈಯಕ್ತಿಕ ದಾಳಿ ನಿಲ್ಲಬೇಕು. ಮನುವಾದಿ ಮನಸ್ಸುಗಳ ಕುತಂತ್ರವನ್ನು ಬಗ್ಗುಬಡಿಯಲು ನಿಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಹಂಸಲೇಖ ವಿರುದ್ಧ ಜಾತಿವಾದಿಗಳು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ನಿಲ್ಲಬೇಕು ಎಂದರು. ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಂಸಲೇಖ ತೇಜೋವಧಗೆ ಅವಕಾಶ ನೀಡಬಾರದು ಎಂದರು.


