ದೇಶದ ನ್ಯಾಯಾಂಗದ ಮೂಲಭೂತ ಸೌಲಭ್ಯಗಳ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬಾಂಬೆ ಹೈಕೋರ್ಟ್ ನ ಔರಂಗಾಬಾದ್ ಪೀಠದ ಹೊಸ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಸಮ್ಮುಖದಲ್ಲೇ ರಮಣ ಬೇಸರ ಹೊರಹಾಕಿದ್ದಾರೆ.
ಭಾರತದಲ್ಲಿ ನ್ಯಾಯಾಲಯಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದು ನಂತರದ ಚಿಂತನೆಯಾಗಿದೆ. ಇಂತಹ ಮನಸ್ಥಿತಿಯಿಂದ ದೇಶದ ನ್ಯಾಯಾಲಯಗಳು ಶಿಥಿಲಗೊಂಡ ಕಟ್ಟಡಗಳಲ್ಲೇ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಕಷ್ಟವಾಗುತ್ತಿದೆ ಎಂದು ಹೇಳಿದರೆಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಕೇವಲ ಶೇ.5 ಪ್ರತಿಶತದಷ್ಟು ನ್ಯಾಯಾಲಯ ಸಂಕೀರ್ಣಗಳು ಮೂಲಭೂತ ವೈದ್ಯಕೀಯ ನೆರವನ್ನು ಹೊಂದಿವೆ. ಶೇಕಡ 26ರಷ್ಟು ನ್ಯಾಯಾಲಯಗಳು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ಹೊಂದಿಲ್ಲ. ಶೇ.16ರಷ್ಟು ನ್ಯಾಯಾಲಯಗಳು ಪುರುಷರಿಗೆ ಶೌಚಾಲಯಗಳನ್ನು ಹೊಂದಿಲ್ಲ. ಸುಮಾರು 50 ಪ್ರತಿಶತದಷ್ಟು ನ್ಯಾಯಾಲಯ ಸಂಕೀರ್ಣಗಳು ಗ್ರಂಥಾಲಯವನ್ನು ಹೊಂದಿಲ್ಲ. 46ಪ್ರತಿಶತದಷ್ಟು ನೀರನ್ನು ಶುದ್ದೀಕರಿಸುವ ಸೌಲಭ್ಯ ಹೊಂದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
“ನೀವು ನ್ಯಾಯಾಂಗ ವ್ಯವಸ್ಥೆಯಿಂದ ವಿಭಿನ್ನ ಫಲಿತಾಂಶವನ್ನು ಬಯಸಿದರೆ, ನಾವು ಈ ಪ್ರಸ್ತುತ ಸ್ಥಿತಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ” ಎಂದು ಸಚಿವರ ಸಮ್ಮುಖದಲ್ಲೇ ಹೇಳಿದರು.
“ನಾನು ಕೇಂದ್ರ ಕಾನೂನು ಸಚಿವರಿಗೆ ಪ್ರಸ್ತಾವನೆಯನ್ನು ಕಳುಹಿಸಿದ್ದೇನೆ. ನಾನು ಶೀಘ್ರದಲ್ಲೇ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೇನೆ ಮತ್ತು ಕೇಂದ್ರ ಕಾನೂನು ಸಚಿವರು ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತಾರೆ” ಎಂದು ತಿಳಿಸಿದರು.
ಭಾರತದ ನ್ಯಾಯಾಲಯಗಳು ಸಾಂವಿಧಾನಿಕ ಹಕ್ಕುಗಳಿಗೆ ಖಾತರಿ ನೀಡುತ್ತವೆ ಮತ್ತು ಕಾರ್ಯಾಂಗದ ಕಾರ್ಯಗಳ ವಿರುದ್ದ ಜನರನ್ನು ರಕ್ಷಿಸಿವೆ ಎಂದು ಹೇಳಿದ ಮುಖ್ಯನ್ಯಾಯಮೂರ್ತಿಗಳು ಅನೇಕ ಬಾರಿ ಜನರು ನ್ಯಾಯಾಲಯಗಳನ್ನು ಸಂಪರ್ಕಿಸಲು ಉತ್ಸುಕರಾಗಿರುವುದಿಲ್ಲ. ಆದರೆ ನಾವು ಇದನ್ನು ಹೊರಹಾಕುವ ಸಮಯ ಬಂದಿದೆ. ನ್ಯಾಯಾಂಗದ ಮೇಲಿನ ಜನರ ನಂಬಿಕೆಯೇ ಪ್ರಜಾಪ್ರಭುತ್ವದ ದೊಡ್ಡ ಶಕ್ತಿ ಎಂದು ವಿವರಿಸಿದರು.