ಶಾಸಕ ಜಿಗ್ನೇಶ್ ಮೇವಾನಿ, ವಿದ್ಯಾರ್ಥಿ ಹೋರಾಟಗಾರ ಕನ್ಹಯ್ಯಕುಮಾರ್ ಮತ್ತು ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದ ಬಳಿಕ ಬಿಹಾರದ ಮಹಾಘಟಬಂಧನ್ ನಿಂದ ಕಾಂಗ್ರೆಸ್ ಹೊರಬಂದಿದೆ. ಉಪಚುನಾವಣೆ ಏಕಾಂಗಿಯಾಗಿ ಸ್ಪರ್ಥಿಸುವುದು ಮಾತ್ರವಲ್ಲ 2024ರಲ್ಲಿ ಬಿಹಾರದ ಎಲ್ಲಾ 40 ಲೋಕಸಭಾ ಸ್ಥಾನಗಳಿಗೂ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಪಕ್ಷ ಘೋಷಿಸಿದೆ.
ಅಕ್ಟೋಬರ್ 22ರಂದು ಕನ್ಹಯ್ಯಕುಮಾರ್ ಮತ್ತು ಶಾಸಕ ಜಿಗ್ನೇಶ್ ಮೇವಾನಿ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಬಳಿಕ ಬಿಹಾರದಲ್ಲಿ ಉಪಚುನಾವಣೆ ಸಂಬಂಧ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಕನ್ಹಯ್ಯಕುಮಾರ್, ಜಿಗ್ನೇಶ್ ಮೇವಾನಿ, ಹಾರ್ದಿಕ್ ಪಟೇಲ್ ಆಗಮನದಿಂದ ಕಾಂಗ್ರೆಸ್ ತಂತ್ರಗಾರಿಕೆ ಬದಲಾಗಿದೆ. ಉಪಚುನಾವಣೆಯಲ್ಲಿ ಈ ಮೂವರು ಯುವ ನಾಯಕರು ಸ್ಟಾರ್ ಪ್ರಚಾರಕರಾಗಿ ಸಭೆಗಳಲ್ಲಿ ಭಾಷಣ ಮಾಡಲಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಬಿಹಾರದ ಕುಶೇಶ್ವರ ಆಸ್ಥಾನ ಮತ್ತು ತಾರಾಪುರ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಉಪಚುನಾವಣೆ ನಡೆಯಲಿದೆ. ಈ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇವೆ. ಸೀಟು ಹಂಚಿಕೆ ಮುಗಿದ ಅಧ್ಯಾಯ ಎಂದು ಕಾಂಗ್ರೆಸ್ ಉಸ್ತುವಾರಿ ತಾರಿಕ್ ಅನ್ವರ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಸ್ವಂತ ಬಲದ ಮೇಲೆ ಉಪಚುನಾವಣೆಯನ್ನು ಎದುರಿಸುತ್ತಿದೆ. ಈ ತೀರ್ಮಾನ ಪಕ್ಷಕ್ಕೆ ಹೆಚ್ಚು ಅನುಕೂಲವಾಗಲಿದೆ. ಫಲಿತಾಂಶ ಪಕ್ಷದ ತೀರ್ಮಾನಕ್ಕೆ ಪೂರಕವಾಗಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆಸ್ಥಾನ ಮತ್ತು ತಾರಾಪುರ ಎರಡೂ ಕ್ಷೇತ್ರಗಳಲ್ಲಿ ಗೆಲುವಿಗಾಗಿ ಹೋರಾಟ ಮಾಡುತ್ತೇವೆ. ಇದು ಸ್ನೇಹಿತರ ನಡುವಿನ ಹೋರಾಟವಲ್ಲ ಎಂದು ತಾರಿಕ್ ಅನ್ವರ್ ಸ್ಪಷ್ಡಪಡಿಸಿದರು.
ಬಿಹಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಜನ ಬೆಂಬಲ ವ್ಯಕ್ತವಾಗಿದೆ. ಎರಡೂ ಕ್ಷೇತ್ರದ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವು ಖಚಿತ. ಕನ್ಹಯ್ಯ, ಜಿಗ್ನೇಶ್ ಮತ್ತು ಹಾರ್ದಿಕ್ ಪ್ರವೇಶದಿಂದ ಪಕ್ಷಕ್ಕೆ ಸಾಕಷ್ಟು ಬಲ ಬಂದಿದೆ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಕಾಂಗ್ರೆಸ್ 40 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ ಎಂದರು.
ನಮ್ಮದು ಹಳೆಯ ಪಕ್ಷ. ದೇಶ ಹಾಗೂ ಬಿಹಾರ ರಾಜ್ಯವನ್ನು ಉಳಿಸಲು ಹೋರಾಟ ನಡೆಸುತ್ತೇವೆ. ಗೆಲುವಿಗಾಗಿ ಹೋರಾಟ ಮಾಡುತ್ತೇವೆ. ದೇಶವನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.