ಸಾಹಿತಿ, ವಿಮರ್ಶಕ, ನಿವೃತ್ತ ಪ್ರಾಧ್ಯಾಪಕ ಹಾಗೂ ಕಲಾವಿದ ಜಿ.ಕೆ.ಗೋವಿಂದರಾವ್ ಶುಕ್ರವಾರ ಮುಂಜಾನೆ ಹುಬ್ಬಳ್ಳಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಿಚಾರವಾದಿ ಗೋವಿಂದರಾವ್ ಅಪಾರ ಶಿಷ್ಯ ಸಮೂಹವನ್ನು ಅಗಲಿದ್ದಾರೆ.
ಜಿ.ಕೆ.ಗೋವಿಂದರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿದ್ದ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿ ನಿವೃತ್ತರಾಗಿ ಸಿನಿಮಾದಲ್ಲಿ ನಟಿಸುತ್ತಿದ್ದರು.
ನಾಗರಿಕತೆಯ ಅರಾಜಕತೆ, ಬಿಂಬಿ-ಪ್ರತಿಬಿಂಬ, ಕ್ರಿಯೆ-ಪ್ರತಿಕ್ರಿಯೆ, ನಡೆ-ನುಡಿ, ಶೇಕ್ಸ್ ಪಿಯರ್ ಸಂವಾದ, ಈಶ್ವರ ಅಲ್ಲಾ, ಶೇಕ್ಸ್ ಪಿಯರ್ ನ ಎರಡು ನಾಟಕಗಳ ಅಧ್ಯಯನ, ಮನು ವರ್ಸಸ್ ಅಂಬೇಡ್ಕರ್ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.
ಜಿ.ಕೆ.ಗೋವಿಂದರಾವ್ ತೀಕ್ಷ್ಣ ಟೀಕಾಕಾರರಾಗಿದ್ದರು. ಬೆಂಗಳೂರಿನ ಗಾಂಧೀನಗರದಲ್ಲಿ ನಿರ್ಮಾಣವಾದ ಕನ್ನಡ ಚಲನಚಿತ್ರಗಳ ಗುಣಮಟ್ಟವನ್ನು ದರಿದ್ರ ಎಂದು ಕರೆದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಕೆಲ ಚಿತ್ರನಿರ್ಮಾಪಕರು ಗೋವಿಂದ ರಾವ್ ಹೇಳಿಕೆಯನ್ನು ಖಂಡಿಸಿದರು. ಕ್ಷಮೆಯಾಚನೆಗೆ ಒತ್ತಾಯಿಸಿದರು.
ಅಷ್ಟೇ ಅಲ್ಲ ಕಾದಂಬರಿಕಾರಿ ಎಸ್.ಎಲ್.ಭೈರಪ್ಪ, ವಿಶ್ವೇಶ್ವರತೀರ್ಥ ಪೇಜಾವರ ಸ್ವಾಮಿ, ಮತ್ತು ಪ್ರಧಾನಿ ನರೇಂದ್ರಮೋದಿ ಅವರು ಅಲ್ಪಸಂಖ್ಯಾತರ ವಿರೋಧಿ ಎಂದು ಟೀಕಿಸಿ ವಿವಾದ ಸೃಷ್ಟಿಸಿದ್ದರು. ವಿಠ್ಠಲ ಮಲೆಕುಡಿಯ ಅವರನ್ನು ನಕ್ಸಲರೊಂದಿಗಿನ ಸಂಪರ್ಕದ ಆರೋಪದ ಮೇಲೆ ಬಂಧಿಸಿದಾಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ರಂಗಭೂಮಿ ಮತ್ತು ಸಿನಿಮಾ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದ ಜಿ.ಕೆ.ಗೋವಿಂದರಾವ್ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಗ್ರಹಣ, ಮಿಥಿಲೆಯ ಸೀತೆಯರು, ಕರ್ಪ್ಯೂ, ನಿಶಬ್ದ, ಭೂಮಿ ತಾಯಿಯ ಚೊಚ್ಚಲ ಮಗ, ಅಜ್ಜ, ಶಾಸ್ತ್ರೀ, ರೀ ಸಿನಿಮಾಗಳಲ್ಲಿ ನಟಿಸಿ ತಮ್ಮ ಮಾತುಕತೆಯಿಂದ ಗಮನ ಸೆಳೆದಿದ್ದರು.
ಕಿರುತೆರೆಯಲ್ಲೂ ನಟನೆಗೆ ಹೆಸರಾಗಿದ್ದರು. ಮಹಾಪರ್ವ ಮತ್ತು ಮಾಲ್ಗುಡಿ ಡೇಸ್ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.


