ಲಖಿಂಪುರ್ ಖೇರಿ ಹಿಂಸಾಚಾರದ ತನಿಖೆ ನಡೆಸುತ್ತಿರುವ ಎಸ್ಐಟಿ ಗುರುವಾರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಹಾಗೂ ಇತರೆ ಮೂವರು ಆರೋಪಿಗಳನ್ನು ಉತ್ತರ ಪ್ರದೇಶದ ಟಿಕೊನಿಯಾ ಗ್ರಾಮದಲ್ಲಿ ನಡೆದ ಘಟನೆಗಳ ಸರಣಿಯನ್ನು ಮರುಸೃಷ್ಟಿಸಲು ಕರೆದೊಯ್ಯಿತು.
ಬಿಗಿಭದ್ರತೆ ನಡುವೆ ಮೂವರು ಆರೋಪಿಗಳನ್ನು ಲಖಿಂಪುರ್ ಖೇರಿಯಿಂದ 60 ಕಿಲೋ ಮೀಟರ್ ದೂರದಲ್ಲಿರುವ ಟಿಕೊನಿಯಾ-ಬನ್ಪೀರ್ ಪುರ್ ರಸ್ತೆಯ ಘಟನಾ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರ.ೆ
ಅಕ್ಟೋಬರ್ 3ರಂದು ಎಸ್.ಯುವಿ ವಾಹನ ಹರಿಸಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿಯನ್ನು ಹತ್ಯೆಗೈಯ್ಯಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ ರೈತರು ಬಿಜೆಪಿ ಕಾರ್ಯಕರ್ತರನ್ನು ಹೊತ್ತೊಯ್ಯುತ್ತಿದ್ದ ವಾಹನವನ್ನು ಸುಟ್ಟು ಹಾಕಿದ್ದರು.
ಘಟನೆಯಲ್ಲಿ ನಾಲ್ವರು ರೈತರು, ಇಬ್ಬರು ಬಿಜೆಪಿ ಕಾರ್ಯಕರ್ತರು, ಚಾಲಕ ಮತ್ತು ಒಬ್ಬ ಪತ್ರಕರ್ತನ್ನು ಹತ್ಯೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸಚಿವ ಅಜಯ್ ಕುಮಾರ್ ಮಿಶ್ರಾ ಪುತ್ರ ಅಶಿಶ್ ಮಿಶ್ರಾ ಕೂಡ ವಾಹನದಲ್ಲಿದ್ದರು ಎಂದು ರೈತರು ಆರೋಪಿಸಿದ್ದರು.
ಎಸ್.ಯುವಿ ವಾಹನದ ಎಡಭಾಗದಿಂದ ಅಶಿಶ್ ಮಿಶ್ರಾ ಇಳಿದು ಓಡಿಹೋಗುತ್ತಿರುವ ದೃಶ್ಯವಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಎಸ್ಐಟಿ ನೀಡಿದ ಮೊದಲ ನೋಟಿಸ್ ಗೆ ಅಶಿಶ್ ಸ್ಪಂದಿಸಿರಲಿಲ್ಲ. ಎರಡನೇ ನೋಟಿಸ್ ನೀಡಿದ ಬಳಿ ಎಸ್ಐಟಿ ವಿಚಾರಣೆಗೆ ತೆರಳಿದ್ದರು.
ಎಸ್ಐಟಿ ಅಧಿಕಾರಿಗಳಿಂದ ಸತತ 12 ಗಂಟೆಗಳ ಕಾಲ ಅಶಿಶ್ ಅವರನ್ನು ಪ್ರಶ್ನೆ ಮಾಡಲಾಯಿತು. ನಂತರ ಬಂಧಿಸಲಾಗಿತ್ತು. ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತ್ತು. ನಂತರ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿತ್ತು. ಹಾಗಾಗಿ ಎಸ್ಐಟಿ ಲಖಿಂಪುರ್ ಖೇರಿಯ ಅಪರಾಧ ದೃಶ್ಯವನ್ನು ಮರುಸೃಷ್ಟಿಸಲು ಇಂದು ಟಿಕೊನಿಯಾ ಗ್ರಾಮಕ್ಕೆ ಕರೆದೊಯ್ದಿದೆ.
ಲಖಿಂಪುರ್ ಖೇರಿ ಘಟನೆಗೆ ಸಂಬಂಧಿಸಿದಂತೆ 38 ವರ್ಷದ ಅಂಕಿತ್ ದಾಸ್ ಮತ್ತು 37 ವರ್ಷದ ಲತೀಪ್ ಅಲಿಯಾಸ್ ಕಾಳ ಅವರನ್ನು ಬಂಧಿಸಲಾಗಿದೆ.
ಆದಿತ್ಯನಾಥ್, ಅಜಯ್ ಮಿಶ್ರಾ ರಾಜಿನಾಮೆಗೆ ಆಗ್ರಹ:
ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ರೈತರ ಹತ್ಯಾಪ್ರಕರಣವನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿರುವ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಕೂಡಲೇ ರಾಜಿನಾಮೆ ನೀಡಬೇಕು ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಆಗ್ರಹಿಸಿದ್ದಾರೆ.