ದೇಶದಲ್ಲಿ ಕಲ್ಲಿದ್ದಲು ಅಭಾವದ ಸಮಸ್ಯೆ ಗಂಭೀರ ಸ್ವರೂಪ ಪಡೆದಿದೆ. ಈಗಿನ ಕೊರತೆಗೆ ಮಳೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಲ್ಲಿದ್ದಲು ಬೆಲೆ ಹೆಚ್ಚಳ ಎಂಬ ಕಾರಣಗಳನ್ನು ಕೇಂದ್ರ ಸರ್ಕಾರ ನೀಡಿದರೂ ಸುಳ್ಳುಗಳಿಗೆ ಕುಖ್ಯಾತಿ ಪಡೆದಿರುವ ಸರ್ಕಾರದ ಹೇಳಿಕೆಗಳನ್ನು ಜನ ನಂಬುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಕಲ್ಲಿದ್ದಲು ಕೊರತೆ ಕೃತಕವೋ ಅಥವಾ ಸ್ವಾಭಾವಿಕವೋ ಎಂಬ ಬಗ್ಗೆ ಮೊದಲು ಗೊತ್ತಾಗಬೇಕು. ಕಲ್ಲಿದ್ದಲು ಅಭಾವದ ಕಾರಣವೊಡ್ಡಿ ವಿದ್ಯುತ್ ಪೂರೈಸುವ ಕಂಪನಿಗಳ ಜೊತೆ ಶಾಮೀಲಾಗಿ ವಿದ್ಯುತ್ ದರವನ್ನು ಏರಿಸುವ ಹುನ್ನಾರ ಇರಬಹುದು ಎಂದು ಜನ ಸಂಶಯಪಡುವಂತೆ ಆಗಿದೆ ಎಂದು ಆರೋಪಿಸಿದ್ದಾರೆ.
ನಮ್ಮಲ್ಲಿ ಬೇಡಿಕೆಗಿಂತ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗುತ್ತಿದ್ದ ಕಾರಣದಿಂದ ಉಷ್ಣ ವಿದ್ಯುತ್ ಸ್ಥಾವರಗಳನ್ನು ಸ್ಥಗಿತ ಮಾಡಲಾಗಿತ್ತು. ರಾಜ್ಯ ಸರ್ಕಾರ ವಿದ್ಯುತ್ ಉತ್ಪಾದಕಾ ಘಟಕಗಳನ್ನು ಖಾಸಗಿಯವರಿಗೆ ನೀಡುವ ಉದ್ದೇಶದಿಂದ ಕಲ್ಲಿದ್ದಲಿನ ಕೃತಕ ಅಭಾವ ಸೃಷ್ಟಿ ಮಾಡಿದ್ದರೆ ಅದಕ್ಕೆ ವಿರೋಧವಿದೆ ಎಂದು ಹೇಳಿದ್ದಾರೆ.
2013ರ ಮೊದಲು ನಿರಂತರ ವಿದ್ಯುತ್ ಕಡಿತದಿಂದಾಗಿ ಕರ್ನಾಟಕವೂ ಕಗ್ಗತ್ತಲ ರಾಜ್ಯವಾಗಿತ್ತು. ಅದರ ನಂತರದ ಐದು ವರ್ಷಗಳ ಕಾಲದ ನಮ್ಮ ಆಡಳಿತದಲ್ಲಿ ವಿದ್ಯುತ್ ಪೂರೈಕೆ ಸುಗಮವಾಗಿತ್ತು. ಈಗ ಮತ್ತೆ ರಾಜ್ಯ ಕಗ್ಗತ್ತಲ ದಿನಗಳಿಗೆ ಮರಳಲಿದೆಯೇ ಎಂಬ ಆತಂಕ ಜನರನ್ನು ಕಾಡುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.