ಲಖಿಂಪುರಖೇರಿ ರೈತರ ಹತ್ಯಾ ಪ್ರಕರಣದ ಪ್ರಮುಖ ಆರೋಪಿ ಅಶಿಶ್ ಮಿಶ್ರಾ ಅವರನ್ನು ಷರತ್ತಿನ ಮೇಲೆ ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ವಿಚಾರಣೆಗಾಗಿ ನೀಡಲಾಗಿದೆ ಎಂದು ಪ್ರಾಸಿಕ್ಯೂಷನ್ ಅಧಿಕಾರಿ ಎಸ್.ಪಿ ಯಾದವ್ ತಿಳಿಸಿದ್ದಾರೆ.
ಚೀಪ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಚಿಂತರಾಮು ಷರತ್ತುಗಳ ಮೇಲೆ ಅಶಿಶ್ ಅವರನ್ನು ಪೊಲೀಶ್ ವಶಕ್ಕೆ ಒಪ್ಪಿಸಿದರು. ಅದರಂತೆ ಅಕ್ಟೋಬರ್ 12 ರಿಂದ 15ರವರೆಗೆ ಅಶಿಶ್ ಪೊಲೀಸರ ವಿಚಾರಣೆ ಎದುರಿಸಬೇಕಾಗಿದೆ.
“ಆರೋಪಿ ಅಶಿಶ್ ಅವರನ್ನು ವಿಚಾರಣೆಗೆ ಕರೆದೊಯ್ಯುವ ಪ್ರತಿಬಾರಿಯೂ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು. ವಿಚಾರಣೆ ಸಮಯದಲ್ಲಿ ಆರೋಪಿಗೆ ಹಿಂಸೆಯನ್ನು ನೀಡಬಾರದು. ವಿಚಾರಣೆಯ ಸಮಯದಲ್ಲಿ ದೂರದಿಂದಲೇ ಆತನನ್ನು ವೀಕ್ಷಿಸಲು ಆತನ ವಕೀಲರಿಗೆ ಅನುಮತಿ ನೀಡಬೇಕು” ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ ಎಂದು ಎಸ್.ಪಿ. ಯಾದವ್ ಸ್ಪಷ್ಟಪಡಿಸಿದ್ದಾರೆ.
ಕೆಳಹಂತದ ನ್ಯಾಯಾಲಯದಲ್ಲಿ ರೈತರ ಹತ್ಯೆಯ ಪ್ರಮುಖ ಆರೋಪಿ ಅಶಿಶ್ ಅವರನ್ನು 14 ದಿನ ಪೊಲೀಸರ ವಶಕ್ಕೆ ನೀಡುವಂತ ಮನವಿ ಮಾಡಲಾಗಿತ್ತು. ಆದರೆ ಕೆಳನ್ಯಾಯಾಲಯ ಆರೋಪಿಯನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಈ ನಡುವೆ ಪೊಲೀಸರು ರಿಮಾಂಡ್ ಅರ್ಜಿಯನ್ನು ಸಿಜೆಎಂ ನ್ಯಾಯಾಲಯದ ಮುಂದೆ ಸಲ್ಲಿಸಿದ್ದರು. ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಷರತ್ತುಗಳನ್ನು ಹಾಕಿ ಪೊಲೀಸರ ವಶಕ್ಕೆ ನೀಡಿದೆ.
ಅಕ್ಟೋಬರ್ 3ರ ಭಾನುವಾರ ಲಖಿಂಪುರಖೇರಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಎಸ್.ಯುವಿ ವಾಹನ ಹರಿಸಿ ನಾಲ್ವರು ರೈತರು ಸೇರಿ ಎಂಟು ಮಂದಿಯನ್ನು ಹತ್ಯೆ ಮಾಡಲಾಗಿತ್ತು. ರೈತರ ಮೇಲೆ ಹರಿಸಿದ ವಾಹನದಲ್ಲಿ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಅಶಿಶ್ ಕೂಡ ಇದ್ದರು. ಅಪಘಾತ ಮಾಡಿದ ನಂತರ ವಾಹನದಿಂದ ಅಶಿಶ್ ಇಳಿದು ಓಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.