ಲಖಿಂಪುರಖೇರಿ ನಾಲ್ವರು ರೈತರ ಹತ್ಯೆಗೆ ಕಾರಣರಾದ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತು ಪುತ್ರ ಅಶಿಶ್ ಬಂಧನಕ್ಕೆ ಆಗ್ರಹಿಸಿ ಅಕ್ಟೋಬರ್ 18ರಂದು ರೈಲು ಕೋಖೋ ಹಮ್ಮಿಕೊಳ್ಳಲಾಗಿದೆ ಎಂದು ಕಿಸಾನ್ ಸಂಯುಕ್ತ ಮೋರ್ಚಾ ಮುಖ್ಯಸ್ಥ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಯೋಗೇಂದ್ರ ಯಾದವ್, ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ತೆಗೆದು ಹಾಕಿ ಬಂಧಿಸಬೇಕು. ಮೆರವಣಿಗೆಯಲ್ಲಿ ತೆರಳುತ್ತಿದ್ದ ರೈತರ ಮೇಲೆ ಎಸ್.ಯುವಿ ವಾಹನ ಹತ್ತಿಸಿದ ಅಶಿಶ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಅಕ್ಟೋಬರ್ 3ರಂದು ಎಸ್.ಯುವಿ ವಾಹನ ಹತ್ತಿಸಿ ಹತ್ಯೆಯಾದ ರೈತರಿಗೆ ಸಂತಾಪ ಸೂಚಿಸಲು ಅಕ್ಟೋಬರ್ 12ರಂದು ಲಖಿಂಪುರ ಖೇರಿಯಲ್ಲಿ ಶ್ರದ್ಧಾಂಜಲಿ ಸಭೆ ಹಮ್ಮಿಕೊಂಡಿದ್ದೇವೆ. ದೇಶದ ಎಲ್ಲೆಡೆಯಿಂದ ಸಾವಿರಾರು ಮಂದಿ ರೈತರು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು.

ರೈತರ ಹತ್ಯೆಗೆ ಪಿತೂರಿ ನಡೆದಿದೆ. ಆದರೂ ಒಕ್ಕೂಟ ಸರ್ಕಾರ ಚಕಾರ ಎತ್ತಿಲ್ಲ. ಆದ್ದರಿಂದ ಅಕ್ಟೋಬರ್ 15ರ ದಸರಾ ಹಬ್ಬದ ದಿನದಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿ ದಹನ ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿಭಟನಾನಿರತ ರೈತರ ವಿರುದ್ಧ ದೌರ್ಜನ್ಯ ನಡೆಸಲು ಸಿದ್ದತೆ ನಡೆದಿದೆ. ಇಂತಹ ಸಮಯದಲ್ಲಿ ನಾವು ಹಿಂಸೆಯ ಮಾರ್ಗ ಹಿಡಿಯುವುದಿಲ್ಲ. ರೈತರ ಹತ್ಯೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ರೈತ ನಾಯಕ ಜೋಗಿಂದರ್ ಸಿಂಗ್ ಉಗ್ರಹಾನ್ ಒತ್ತಾಯಿಸಿದರು.
ಲಖಿಂಪುರ ಖೇರಿ ರೈತರ ಹತ್ಯೆ ಪ್ರಕರಣ ಪೂರ್ವಯೋಜಿತ ಪಿತೂರಿಯ ಭಾಗವಾಗಿದೆ. ಸರ್ಕಾರ ರೈತರನ್ನು ಭಯೋತ್ಪಾದಕರನ್ನಾಗಿ ಬಿಂಬಿಸಲು ಯತ್ನಿಸುತ್ತಿದೆ ಎಂದು ರೈತ ಮುಖಂಡ ದರ್ಶನ್ ಪಾಲ್ ಆರೋಪಿಸಿದರು.
ಉತ್ತರಪ್ರದೇಶದ ಪ್ರತಿಪಕ್ಷ ನಾಯಕ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ “ಲಖಿಂಪುರಖೇರಿಯಲ್ಲಿ ರೈತರ ಪ್ರತಿಭಟನೆಗೆ ಅಡ್ಡಿಪಡಿಸಿದರು. ಈಗ ಕಾನೂನು ನಾಶ ಮಾಡುವ ಸಿದ್ದತೆ ನಡೆಯುತ್ತಿದೆ. ಸಂವಿಧಾನವನ್ನು ತಿರುಚಲಾಗುತ್ತಿದೆ. ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಎಷ್ಟು ವಾಹನಗಳು ಹರಿದವು ಎಂಬುದು ನಿಮಗೂ ಗೊತ್ತು. ಆದರು ತಪ್ಪಿತಸ್ಥರು ಇದುವರೆಗೂ ಸಿಕ್ಕಿಲ್ಲ.” ಎಂದು ಆದಿತ್ಯನಾಥ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.


