ಲಖಿಂಪುರಖೇರಿ ರೈತರ ಹತ್ಯೆ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರ ತೆಗೆದುಕೊಂಡಿರುವ ಕ್ರಮದ ಬಗ್ಗೆ ಸುಪ್ರೀಂಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ. ಸಿಆರ್.ಪಿ.ಸಿ ಸೆಕ್ಷನ್ 302ರಡಿ ಪ್ರಕರಣ ದಾಖಲಿಸಿದ್ದರೆ ಕೂಡಲೇ ಆರೋಪಿಗಳನ್ನು ಬಂಧಿಸಿ ಎಂದು ಸುಪ್ರೀಂ ಸೂಚಿಸಿದೆ.
ಉತ್ತರ ಪ್ರದೇಶ ಸರ್ಕಾರದ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ಹಾಜರಾಗಿ, “ಮರಣೋತ್ತರ ಪರೀಕ್ಷೆ ವರದಿಯಲ್ಲಿ ಗುಂಡು ತಗುಲಿದ ಗಾಯಗಳು ಕಂಡುಬಂದಿಲ್ಲ. ಆದ್ದರಿಂದ ಸಿಆರ್.ಪಿ.ಸಿ ಸೆಕ್ಷನ್ 160ರಡಿ ನೋಟೀಸ್ ನೀಡಲಾಗಿದೆ. ಆರೋಪಗಳು ಸತ್ಯ. ಸೆಕ್ಷನ್ 302ರಡಿ ಪ್ರಕರಣ ದಾಖಲಿಸಲಾಗಿದೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಆಗ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ “ಇದು ಗಂಭೀರ ಆರೋಪ. ಗುಂಡು ಹಾರಿಸಿ ಗಾಯಗಳಾಗಿವೆ.ಆದರೂ ಆರೋಪಿಗಳ ವಿರುದ್ದ ಕ್ರಮ ಕೈಗೊಂಡಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಜವಾಬ್ದಾರಿ ಇದೆ. ಇದು ಗಂಬೀರ ವಿಚಾರ” ಎಂದು ಹೇಳಿದರು.
‘ಇಂತಹ ಪ್ರಕರಣದಲ್ಲಿ ಬೇರೆ ಆರೋಪಿಗಳನ್ನು ಇದೇ ರೀತಿ ನಡೆಸಿಕೊಳ್ಳುತ್ತೀರಾ’ ಎಂದು ವಕೀಲ ಹರೀಶ್ ಸಾಳ್ವೆ ಅವರನ್ನು ಸುಪ್ರೀಂಕೋರ್ಟ್ ಸಿಐಜೆ ರಮಣ ಪ್ರಶ್ನಿಸಿದರು. ಕ್ರಮ ಕೈಗೊಳ್ಳಲಾಗಿದೆ ಎಂಬ ಹರೀಶ್ ಸಾಳ್ವೆ ಮಾತಿಗೆ ಸಿಐಜೆ ಕೇವಲ ಪದಗಳಲ್ಲಿ ಕ್ರಮವೇ? ನಾವು ಯಾವ ರೀತಿಯ ಸಂದೇಶವನ್ನು ರವಾನಿಸುತ್ತಿದ್ದೇವೆ ಎಂದು ಕೇಳಿದರು.
ಎಸ್.ಐ.ಟಿ ವಿವರಗಳನ್ನು ಎದುರುನೋಡುತ್ತಿದ್ದೇವೆ. ಡಿಐಜಿ ನ್ಯಾಯಾಲಯಕ್ಕೆ ಬಂದಿಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸುತ್ತೀರಾ? ಎಂದು ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಪ್ರಶ್ನಿಸಿದಾಗ ಹರೀಶ್ ಸಾಳ್ವೆ ಅವರು ‘ಇದು ನಿಮ್ಮ ಕೈಯಲ್ಲಿದೆ’ ಎಂದು ಹೇಳಿದರು ಎಂದು ಬಾರ್ ಅಂಡ್ ಬೆಂಚ್ ವರದಿ ತಿಳಿಸಿದೆ.
ಇದರಿಂದ ಸಿಟ್ಟಾದ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ” ಮಿಸ್ಟರ್ ಸಾಳ್ವೆ, ನಿಮಗೆ ಗೌರವ ಕೊಡುತ್ತೇವೆ. ಇದೊಂದು ಸೂಕ್ಷ್ಮ ವಿಚಾರ. ರಾಜ್ಯ ಸರ್ಕಾರ ಅವಶ್ಯಕ ಮತ್ತು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಸಿಬಿಐಗೆ ವಹಿಸುವುದು ಪರಿಹಾರ ಅಲ್ಲ”. ಎಂದು ಹೇಳಿದರು.
“ಈ ಪ್ರಕರಣದಲ್ಲಿ ಒಳ್ಳೆಯ ತನಿಯಾಗುತ್ತದೆಂದು ನಮಗೆ ಗೊತ್ತಿಲ್ಲ. ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಮಧ್ಯದಲ್ಲಿ ಸಾಕ್ಷ್ಯ ನಾಶವಾಗುವ ಸಂಭವವಿದೆ. ಸಾಕ್ಷ್ಯಗಳನ್ನು ರಕ್ಷಿಸಲು ಡಿಜಿಪಿಗೆ ಹೇಳಿ. ಈಗ ಸಲ್ಲಿಸಿರುವ ವರದಿಯಲ್ಲಿ ಕ್ರಮ ಕೈಗೊಂಡಿರುವ ಬಗ್ಗೆ ತೃಪ್ತಿ ಇಲ್ಲ.” ಎಂದು ಸುಪ್ರೀಂಕೋರ್ಟ್ ಹೇಳಿದೆ.