19 ಪ್ರತಿಪಕ್ಷಗಳು ಜನಾಂದೋಲನದ ಮೂಲಕ ದೇಶದ ಉಳುವಿಗಾಗಿ ಹೋರಾಟ ಮಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರದಿಂದ ಕೆಳಗೆ ಇಳಿಯುವವರೆಗೂ ಈ ಹೋರಾಟ ಮುಂದುವರಿಯಲಿದೆ. ಇದಕ್ಕೆ ಪ್ರತಿಪಕ್ಷಗಳು ಜೊತೆಗೂಡಿವೆ ಎಂದು ಸಿಪಿಎಂ ಪ್ರಧಾನಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.
ಹೈದರಾಬಾದ್ ನಲ್ಲಿ ಬಿಜೆಪಿ ಮತ್ತು ಟಿಆರ್.ಎಸ್. ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ಹಮ್ಮಿಕೊಂಡಿದ್ದ ಧರಣಿಯನ್ನುದ್ದೇಶಿಸಿ ಮಾತನಾಡಿದ ಯೆಚೂರಿ ಸೆಪ್ಟೆಂಬರ್ 20 ರಿಂದ 30ರವರೆಗು ದೇಶಾದ್ಯಂತ ಪ್ರತಿಭಟನೆಗಳು ಮುಂದುವರಿಯಲಿವೆ. ಸಮಾಜವಾದಿ ಪಕ್ಷವೂ 19 ಪಕ್ಷಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿಯಿಂದ ದೇಶವನ್ನು ಉಳಿಸಬೇಕೆಂಬ ಉದ್ದೇಶದಿಂದ ಧರಣಿ, ಪ್ರತಿಭಟನೆಗಳು ನಡೆಯುತ್ತಿವೆ. 19 ಪ್ರತಿಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದುಗೂಡಿವೆ. ಪ್ರತಿಯೊಂದು ರಾಜ್ಯದಲ್ಲೂ ಹಲವು ಪಕ್ಷಗಳು ಜೊತೆಯಾಗುತ್ತಿವೆ. ನಮ್ಮ ದೇಶ ಉಳಿಸಬೇಕು. ಇದಕ್ಕಾಗಿ ಮೋದಿ ಅಧಿಕಾರದಿಂದ ಕೆಳಗೆ ಇಳಿಯಬೇಕಾಗಿದೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಸರ್ಕಾರ ಪ್ರಜಾಪ್ರಭುತ್ವದ ಆಧಾರಸ್ಥಂಬಗಳಾದ ಜಾತ್ಯತೀತತೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಒಕ್ಕೂಟ ವ್ಯವಸ್ಥೆ ಮತ್ತು ಆರ್ಥಿಕ ಸಾರ್ವಭೌಮತೆಯನ್ನು ಧ್ವಂಸ ಮಾಡುತ್ತಿದೆ ಎಂದು ಟೀಕಿಸಿದರು.
ಸಂವಿಧಾನ ಇಲ್ಲದಿದ್ದರೆ ಅಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳು ಇರುವುದಿಲ್ಲ. ಆಗ ಸರ್ವಾಧಿಕಾರ ದೇಶವನ್ನು ಆಳ್ವಿಕೆ ಮಾಡುತ್ತದೆ ಎಂದು ಆರೋಪಿಸಿದರು.
ಒಕ್ಕೂಟ ಸರ್ಕಾರ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಮೂಲಕ ಪ್ರತಿಪಕ್ಷಗಳ ನಾಯಕರ ಮೇಲೆ ದಾಳಿ ನಡೆಸುತ್ತಿದೆ. ಪ್ರತಿಪಕ್ಷಗಳ ಮುಖಂಡರು ಶರಣಾಗುವಂತೆ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕೊವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಮತ್ತು ತೆರಿಗೆ ಕಟ್ಟದೇ ಇರುವ ಪ್ರತಿಕುಟುಂಬಕ್ಕೂ ಪ್ರತಿ ತಿಂಗಳು 7,500 ರೂಪಾಯಿ ನೀಡಬೇಕು. ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್, ಸಿಐಪಿ, ಟಿಡಿಪಿ ಸೇರಿದಂತೆ ಬೇರೆ ಪಕ್ಷಗಳ ಮುಖಂಡರು ಧರಣಿಯಲ್ಲಿ ಭಾಗಿಯಾಗಿದ್ದರು.