ವಿದ್ಯಾಸಂಸ್ಥೆಯನ್ನೇ ನಡೆಸದ, ಅನುಭವ ಮತ್ತು ಅರ್ಹತೆಯೇ ಇಲ್ಲದ ಆರ್.ಎಸ್.ಎಸ್ ಟ್ರಸ್ಟ್/ಕಂಪನಿಗೆ ರೈತರಿಂದ ಅಧಿಕ ಬೆಲೆಗೆ ಖರೀದಿಸಿ ಕಡಿಮೆ ಬೆಲೆಗೆ ಭೂಮಿ ನೀಡುತ್ತಿರುವುದು ಕಾನೂನುಬಾಹಿರ ಮತ್ತು ಅಧಿಕಾರ ದುರುಪಯೋಗವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್, ರಾಜ್ಯ ಸರ್ಕಾರ ನೆಲದ ಕಾನೂನುಗಳನ್ನು ಗಾಳಿಗೆ ತೂರಿ ಟ್ರಸ್ಟ್ ಗೆ ವಿವಿ ಸ್ಥಾಪಿಸಲು ಭೂಮಿ ನೀಡುವ ಮೂಲಕ ಆರ್.ಎಸ್.ಎಸ್. ಬೆಳವಣಿಗೆಗೆ ಸಹಕಾರ ನೀಡುತ್ತಿದೆ ಎಂದು ಆರೋಪಿಸಿದರು.
ಹಿಂದಿನ ಸರ್ಕಾರ ಖಾಸಗಿ ವಿದ್ಯಾಸಂಸ್ಥೆಗಳನ್ನು ನಡೆಸುವ ಆಡಳಿತ ಮಂಡಳಿಗೆ ವಿಶ್ವವಿದ್ಯಾಲಯ ಸ್ಥಾಪಿಸಿಕೊಳ್ಳಲು ಅವಕಾಸ ನೀಡಿದೆ. ಭೂಮಿಯನ್ನೂ ನೀಡಿದೆ. ಆದರೆ ಬಿಜೆಪಿ ಸರ್ಕಾರ ವಿದ್ಯಾಸಂಸ್ಥೆ ಇಲ್ಲದ ಟ್ರಸ್ಟ್ ಗೆ ಏರೋಸ್ಪೇಸ್ ಜಾಗದಲ್ಲಿ ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪನೆಗೆ 116 ಎಕರೆ ಭೂಮಿ ನೀಡುತ್ತಿರುವುದು ಸರಿಯಲ್ಲ ಎಂದರು.
ದೇವನಹಳ್ಳಿ ಸಮೀಪ ಒಂದು ಎಕರೆಗೆ ಜಮೀನಿಗೆ 10 ಕೋಟಿ ರೂಪಾಯಿ ಮಾರುಕಟ್ಟೆ ದರವಿದೆ. ಆದರೆ ರಾಜ್ಯ ಸರ್ಕಾರ ಅನುಭವ ಹೊಂದಿಲ್ಲದ ಟ್ರಸ್ಟ್ ವೊಂದಕ್ಕೆ ಕಡಿಮೆ ಬೆಲೆಗೆ ಭೂಮಿ ಕೊಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಒಂದೊಮ್ಮೆ ಭೂಮಿ ನೀಡಲೇಬೇಕು ಎಂದಾದರೆ ಮಾಗಡಿ ಬಳಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ಭೂಮಿ ನೀಡಿದೆ. ಅಲ್ಲೇ ಬೇಕಾದರೆ ಕೊಡಲಿ. ಬೇಡ ಎನ್ನುವವರು ಯಾರೂ ಇಲ್ಲ. ಆದರೆ ರಾಷ್ಟ್ರೀಯ ಹೆದ್ದಾರಿ ಸಮೀಪದ ರಕ್ಷಣಾ ವಲಯಕ್ಕೆ ಮೀಸಲಿಟ್ಟಿರುವ ಭೂಮಿಯನ್ನು ಖಾಸಗಿಯವರಿಗೆ ನೀಡುವುದು ಸೂಕ್ತವಲ್ಲ ಎಂದು ಹೇಳಿದರು.