ಹರ್ಯಾಣದ ಬಿಜೆಪಿ ಮತ್ತು ಐಎನ್ಎಲ್.ಡಿ ಮುಖಂಡರು ದೆಹಲಿಯ ಎಐಸಿಸಿ ಮುಖ್ಯಕಚೇರಿಯಲ್ಲಿಂದು ಕಾಂಗ್ರೆಸ್ ಸೇರ್ಪಡೆಯಾದರು. ಹರ್ಯಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಕುಮಾರಿ ಸೆಲ್ಜಾ ಮತ್ತು ಪಕ್ಷದ ವ್ಯವಹಾರಗಳ ಉಸ್ತುವಾರಿ ವಿವೇಕ್ ಬನ್ಸಾಲ್ ಬಿಜೆಪಿ ಮತ್ತು ಐಎನ್ಎಲ್.ಡಿ ಮುಖಂಡರಿಗೆ ಪಕ್ಷದ ಬಾವುಟ, ಹೂಗುಚ್ಚ ನೀಡಿ ಬರಮಾಡಿಕೊಂಡರು.
ಬಿಜೆಪಿಯಲ್ಲಿ ಬಂಡಾಯ ಬಾವುಟ ಹಾರಿಸಿದ್ದ ಪವನ್ ಬಿನಿವಾಲ್, ಉದ್ಯಮಿ ಅಶೋಕ್ ಗೋಯಲ್ ಮತ್ತು ಮಾಜಿ ಸಂಸದೆ ತಾರ ಸಿಂಗ್ ಪುತ್ರ ಕನ್ವಾಜಿತ್ ಅರ್ ಪ್ರಿನ್ಸ್ ಕಾಂಗ್ರೆಸ್ ಸೇರ್ಪಡೆಗೊಂಡ ಪ್ರಮುಖರು.
ಪವನ್ ಬಿನಿವಾಲ್ ಮತ್ತು ಉದ್ಯಮಿ ಅಶೋಕ್ ಗೋಯಲ್ ಹಿಸಾರ್ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿತರಾಗಿದ್ದರು. ಆದರೆ ಬಿಜೆಪಿ ಈ ಇಬ್ಬರು ಮುಖಂಡರಿಗೆ ಟಿಕೆಟ್ ನೀಡಿರಲಿಲ್ಲ. ಇದರಿಂದ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು ಎಂದು ವರದಿಯಾಗಿದೆ.
2014ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬೆನಿವಾಲ್ ಭಾರತೀಯ ರಾಷ್ಟ್ರೀಯ ಲೋಕದಳವನ್ನು ತೊರೆದು ಬಿಜೆಪಿ ಸೇರಿದ್ದರು. ಎಲ್ಲಾನಬಾದ್ ಕ್ಷೇತ್ರದಿಂದ 2014 ಮತ್ತು 2019ರಲ್ಲಿ ಬಿಜೆಪಿಯ ಟಿಕೆಟ್ ಪಡೆದು ಸ್ಪರ್ಧಿಸಿದ್ದರು. ಆದರೆ ಎರಡು ಬಾರಿಯೂ ಸೋಲು ಕಂಡಿದ್ದರು ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ನಂತರ ಬಿಜೆಪಿ ಬೆನಿವಾಲ್ ಅವರನ್ನು ಹರ್ಯಾಣ ಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. 2016-19ರವರೆಗೆ ಅವರು ಈ ಹುದ್ದೆಯಲ್ಲಿದ್ದರು. ಈ ವರ್ಷದ ಏಪ್ರಿಲ್ ನಲ್ಲಿ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಬೆನಿವಾಲ್ ಬಿಜೆಪಿ ತೊರೆದಿದ್ದರು.
ಕಾಂಗ್ರೆಸ್ ಸೇರ್ಪಡೆಯಾಗಿರುವ ಕರಣ್ ಜಿತ್ ಸಿಂಗ್ ಮಾಜಿ ಲೋಕಸಭಾ ಸದಸ್ಯೆ ತಾರಾ ಸಿಂಗ್ ಪುತ್ರರಾಗಿದ್ದಾರೆ. 10ನೇ ಲೋಕಸಭಾ ಚುನಾವಣೆಯಲ್ಲಿ ಕುರುಕ್ಷೇತ್ರದಿಂದ ಸ್ಪರ್ಧಿಸಿ ಕರಣ್ ಜಿತ್ ಸಿಂಗ್ ಆಯ್ಕೆಯಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿವೇಕ್ ಬನ್ಸಾಲ್, ಮುಖಂಡರ ಸೇರ್ಪಡೆಯಿಂದ ಹರ್ಯಾಣದಲ್ಲಿ ಕಾಂಗ್ರೆಸ್ ಗೆ ಮಹತ್ವ ಬಂದಿದೆ. ಪಕ್ಷದಲ್ಲಿ ಅವರನ್ನು ಗೌರವಯುತವಾಗಿ ನೋಡಿಕೊಳ್ಳಲಾಗುವುದು ಮತ್ತು ಉತ್ತಮ ಸ್ಥಾನಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.


