ವಿಧಾನಸಭಾ ಚುನಾವಣೆ ಒಂದು ವರ್ಷ ಇರುವ ಮೊದಲೇ ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿ ದಿಢೀರ್ ರಾಜಿನಾಮೆ ನೀಡಿದ್ದಾರೆ. ಗುಜರಾತ್ ದೀರ್ಘ ಕಾಲದ ಹಿತದೃಷ್ಟಿಯಿಂದ ನಾನು ರಾಜಿನಾಮೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಜಯ ರೂಪಾನಿ ರಾಜಿನಾಮೆ ಪತ್ರವನ್ನು ರಾಜ್ಯಪಾಲ ಆಚಾರ್ಯ ದೇವವ್ರತ ಸಲ್ಲಿಸಿದ್ದಾರೆ. ಇದೊಂದು ಸಾಮಾನ್ಯ ಪ್ರಕ್ರಿಯೆ. ಭಿನ್ನ ಸಮಯದಲ್ಲಿ ಭಿನ್ನ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಪಕ್ಷದ ಹೊಸ ನಾಯಕತ್ವಕ್ಕೆ ಅವಕಾಶ ಸಿಗಲಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಜಯ ರೂಪಾನಿ, ಪಕ್ಷ ವಹಿಸುವ ಯಾವುದೇ ಜವಾಬ್ದಾರಿಗಳನ್ನು ನಿರ್ವಹಿಸುತ್ತೇನೆ. ಇದೊಂದು ಓಟ ಇದ್ದಂತೆ. ಓಡಬೇಕು, ಮುಂದೆ ಹೋಗಬೇಕು. ಐದು ವರ್ಷ ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸಿದ್ದೇನೆ ಎಂದು ತಿಳಿಸಿದ್ದಾರೆ.
ಈಗ ನಾನು ಬಾವುಟವನ್ನು ಬೇರೆಯವರಿಗೆ ನೀಡುತ್ತೇನೆ. ಅವರೂ ಓಡಬೇಕು. ಇದು ಪಕ್ಷ ತೀರ್ಮಾನ. ಗುಜರಾತ್ ಹಿತದೃಷ್ಟಿಯಿಂದ ಪಕ್ಷ ಈ ತೀರ್ಮಾನ ಕೈಗೊಂಡಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನಮ್ಮ ನಾಯಕರು. ಅವರ ನಾಯಕತ್ವದಲ್ಲೇ 2022ರ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತೇವೆ. ಪಕ್ಷದ ಕಾರ್ಯಕರು ಎಲ್ಲಾ ಕೆಲಸಗಳನ್ನು ನಿಭಾಯಿಸಬೇಕು ಎಂದು ಹೇಳಿದ್ದಾರೆ.