ದೆಹಲಿಯಲ್ಲಿ ಇಂದು ಮುಂಜಾನೆ ದಿಢೀರ್ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅಷ್ಟೇ ಅಲ್ಲ ಹಲವು ಪ್ರದೇಶಗಳು ಜಲಾವೃತವಾಗಿವೆ.
ಆರ್.ಕೆ.ಪುರಂ, ಮಧುವಿಹಾರ,, ಹರಿನಗರ, ರೋಹಟಕ್ ರಸ್ತೆ, ಬದರ್ ಪುರ, ವೋಲಭಾಗ್, ವಿಕಾಸ ಮಾರ್ಗ, ಸಂಗಮ್ ವಿಹಾರ, ರಿಂಗ್ ರಸ್ತೆಯಲ್ಲಿ ನೀರು ತುಂಬಿಕೊಂಡು ಜನ ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.
ಸಧ್ಯಕ್ಕೆ ಬೆಳಗ್ಗೆ 9 ಗಂಟೆಯಿಂದಲೇ ಮಳೆ ಬಿಡುವು ಕೊಟ್ಟಿದ್ದು ದೌಲಕಾನ್ ನಿಂದ ಗುರುಗ್ರಾಮ್ ಗೆ ತೆರಳುವ ಮಾರ್ಗದಲ್ಲಿ ಅಧಿಕ ಪ್ರಾಮಾಣದಲ್ಲಿ ನೀರು ತುಂಬಿಕೊಂಡಿದೆ. ಹೀಗಾಗಿ ಸಂಚಾರ ಮಾರ್ಗ ಬದಲಿಸಿದ್ದು ವಾಹನಗಳು ಕಾರಿಯಪ್ಪ ರಸ್ತೆ ಮೂಲಕ ಗುರುಗ್ರಾಮ್ ಗೆ ತೆರಳುತ್ತಿವೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಭಾರೀ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾನದಲ್ಲಿ ಸಾಕಷ್ಟು ನೀರು ತುಂಬಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ದೇಶಿಯ ಮತ್ತು ಒಂದು ಅಂತಾರಾಷ್ಟ್ರೀಯ ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ ಎಂದು ದೆಹಲಿ ಏರ್ಪೋರ್ಟ್ ಅಧಿಕಾರಿಗಳು ಹೇಳಿದ್ದಾರೆ.
ದೆಹಲಿಗೆ ಬರಬೇಕಿದ್ದ ನಾಲ್ಕು ವಿಮಾನಗಳನ್ನು ಜೈಪುರಕ್ಕೆ ಹಾಗೂ ಅಂತಾರಾಷ್ಟ್ರೀಯ ವಿಮಾನ ಮಾರ್ಗವನ್ನು ಅಹಮದಬಾದ್ ಗೆ ಬದಲಿಸಲಾಗಿದೆ.