Sunday, May 24, 2026
Google search engine
Homeಮುಖಪುಟದೊಡ್ಡ ಕೈಗಾರಿಕೆಗಳ ಬೆಳವಣಿಗೆಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಹಿರಿದು

ದೊಡ್ಡ ಕೈಗಾರಿಕೆಗಳ ಬೆಳವಣಿಗೆಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಹಿರಿದು

ಭಾರತದಲ್ಲಿ ದೊಡ್ಡ ಕೈಗಾರಿಕೆಗಳ ಬೆಳವಣಿಗೆಗೆ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ತರವಾಗಿದೆ ಎಂದು ಏಸ್ ಮೈಕ್ರೋಮ್ಯಾಟಿಕ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಟಿ.ಕೆ. ರಮೇಶ್ ತಿಳಿಸಿದ್ದಾರೆ.

ತುಮಕೂರು ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ದಕ್ಷಿಣ ಭಾರತ ಎಂಎಸ್‌ಎಂಇ ಸಮಾವೇಶ ಹಾಗೂ ಕೈಗಾರಿಕಾ ವಸ್ತುಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಪ್ರದರ್ಶಕರ ಕೈಪಿಡಿ ಬಿಡುಗಡೆ ಮಾಡಿ ಹಾಗೂ ಮಳಿಗೆಗಳನ್ನು ವೀಕ್ಷಿಸಿ ಅವರು ಮಾತನಾಡಿದರು.

ದೊಡ್ಡ ಕೈಗಾರಿಕೆಗಳು ತಮ್ಮ ಉತ್ಪಾದಿತ ವಸ್ತುಗಳನ್ನು ದೇಶದಿಂದ ಹೊರಗಡೆ ಪರಿಚಯಿಸುತ್ತವೆ. ಆದರೆ ಅವುಗಳ ಬೆಳವಣಿಗೆಗೆ ಸಣ್ಣ ಕೈಗಾರಿಕೆಗಳು ಸಹಕಾರಿಯಾಗಿವೆ ಎಂದರು.ಭಾರತ ದೇಶದಿಂದ ಸಣ್ಣ ಕೈಗಾರಿಕೆಗಳಿಂದ ಉತ್ಪಾದನೆಯಾಗುವ ವಸ್ತುಗಳು ಶೇ. 40 ರಷ್ಟು ರಫುö್ತ ಆಗುತ್ತಿವೆ. ಒಳ್ಳೆಯ ಆಲೋಚನೆಗಳು ಒಳ್ಳೆಯ ಸಮಯದಲ್ಲಿ ಹೊರ ಬಂದರೆ ಅವುಗಳಿಗೆ ಉತ್ತಮ ಭವಿಷ್ಯವಿದೆ. ಇದನ್ನು ಯುವ ಉದ್ಯಮಿಗಳು ಹಾಗೂ ಮುಂದಿನ ದಿನಗಳಲ್ಲಿ ಉದ್ಯಮ ಸ್ಥಾಪನೆ ಮಾಡಲು ಬಯಸುವವರು ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಸಣ್ಣ ಕೈಗಾರಿಕೆಗಳಲ್ಲಿ ಉದ್ಯಮಿಗಳು ಗುಣಮಟ್ಟ ಮತ್ತು ಪ್ರಮಾಣವನ್ನು ಕಾಪಾಡಬೇಕು. ಆಗ ಮಾತ್ರ ನಿರೀಕ್ಷಿತ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು. ಸಣ್ಣ ಕೈಗಾರಿಕೆಗಳಲ್ಲಿ ಕೈ ಕೊಳೆಯಾಗುತ್ತದೆ ಎನ್ನುವುದಕ್ಕಿಂತ ಒಬ್ಬರಿಗೊಬ್ಬರು ಕೈ ಜೋಡಿಸುವ ಕೆಲಸ ಮಾಡಬೇಕು. ಇದರಿಂದ ಸಣ್ಣ ಕೈಗಾರಿಕೆಗಳು ದೊಡ್ಡ ಮಟ್ಟದಲ್ಲಿ ಬೆಳವಣಿಗೆಯಾಗಲು ಸಾಧ್ಯವಾಗುತ್ತದೆ ಎಂದರು.

ಕೈಗಾರಿಕಾ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸಲು ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಸಣ್ಣ ಕೈಗಾರಿಕೆಗಳಲ್ಲಿ ಬಂಡವಾಳ ಹೂಡಿಕೆ ಒಂದು ಭಾಗವಾದರೆ, ನಾವು ಕೈಗೊಳ್ಳುವ ಕೈಗಾರಿಕೆಗಳ ಬಗ್ಗೆ ಜ್ಞಾನಾರ್ಜನೆ ಹಾಗೂ ಕೌಶಲ್ಯ ಬಹು ಮುಖ್ಯ. ಆಗ ಮಾತ್ರ ನಾವು ಕೈಗೊಳ್ಳುವ ಉದ್ಯಮದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು. ಒಂದು ಕಾರ್ಯಕ್ರಮ ಮಾಡಬೇಕಾದರೆ ಆಲೋಚನೆ ತುಂಬಾ ಮುಖ್ಯ. ಕಾಸಿಯಾ ತುಂಬಾ ಸಂಘಟನಾತ್ಮಕವಾಗಿ ಕಾರ್ಯಕ್ರಮ ರೂಪಿಸಿದೆ. ಇಲ್ಲಿ ಹಾಕಿರುವ ಮಳಿಗೆಗಳು ಮುಂದಿನ ಕೈಗಾರಿಕೋದ್ಯಮಿಗಳಿಗೆ ಸಹಕಾರಿಯಾಗಿವೆ ಎಂದು ಹೇಳಿದರು.

ಸಣ್ಣ ಕೈಗಾರಿಕೆಗಳ ಬಗ್ಗೆ ಜನರಲ್ಲಿ ಇರುವ ಮನೋಭಾವ ಬದಲಾಗಬೇಕು. ಸಣ್ಣ ಸಣ್ಣ ವಸ್ತುಗಳ ಉತ್ಪಾದನೆಯಿಂದ ದೊಡ್ಡಮಟ್ಟಕ್ಕೆ ಬೆಳೆಯಲು ಸಹಕಾರಿಯಾಗುತ್ತದೆ. ಆದ್ದರಿಂದ ಸಣ್ಣ ಕೈಗಾರಿಕೆಗಳಿಗೆ ಜನರ ಪ್ರೋತ್ಸಾಹ, ಸರ್ಕಾರದ ಬೆಂಬಲವೂ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ವ್ಯವಸ್ಥಾಪಕ ವಿಷ್ಣುವರ್ಧನ್ ರೆಡ್ಡಿ ಮಾತನಾಡಿ, ಕಾಸಿಯಾ ಒಂದು ಒಳ್ಳೆಯ ಕಾರ್ಯಕ್ರಮ ಆಯೋಜನೆ ಮಾಡಿದೆ. ಉತ್ತಮ ಯೋಚನೆ, ಯೋಜನೆ ಇದಾಗಿದೆ. ಸಣ್ಣ ಕೈಗಾರಿಕೆಗಳು ದೇಶದ ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿಗೆ ಕಾರಣವಾಗಿವೆ. ದಕ್ಷಿಣ ಭಾರತ ಭಾಗದ ಈ ಸಮಾವೇಶ ತುಂಬಾ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕಾಸಿಯಾ ಅಧ್ಯಕ್ಷ ಗಣೇಶ್ ರಾವ್ ಮಾತನಾಡಿ, ಸಣ್ಣ ಕೈಗಾರಿಕಾ ವಲಯವು ಪರಸ್ಪರ ಸಂಪರ್ಕ ಸಾಧಿಸಲು, ಸಹಕಾರ ಬೆಳೆಸಿಕೊಳ್ಳಲು ಮತ್ತು ಹೊಸ ಅವಕಾಶಗಳನ್ನು ಅನ್ವೇಷಿಸಲು ಈ ಸಮಾವೇಶ ಸಹಕಾರಿಯಾಗಿದೆ. ಇಲ್ಲಿ ನಡೆದ ತಾಂತ್ರಿಕ ಅಧಿವೇಶನಗಳು, ಪ್ಯಾನೆಲ್ ಚರ್ಚೆಗಳು, ಖರೀದಿದಾರರ-ಮಾರಾಟಗಾರರ ಸಂವಾದಗಳು ಮತ್ತು ಕೈಗಾರಿಕಾ ಪ್ರದರ್ಶನಗಳು ಉದ್ಯಮಿಗಳಿಗೆ ಅಮೂಲ್ಯ ಅನುಭವ ಮತ್ತು ಕಲಿಕೆಯ ಅವಕಾಶಗಳನ್ನು ಒದಗಿಸಿವೆ ಎಂದು ಹೇಳಿದರು.

ಕಾಸಿಯಾ ಸದಾ ಆರ್ಥಿಕತೆಯನ್ನು ಬಲಪಡಿಸಲು ಮತ್ತು ನಮ್ಮ ದೇಶದ ಯುವಕರಿಗೆ ಸುಸ್ಥಿರ ಉದ್ಯೋಗವನ್ನು ಸೃಷ್ಠಿಸಲು ಎಂಎಸ್‌ಎಂಇಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಕೈಗಾರಿಕೆಗಳ ಕಲ್ಯಾಣ ಮತ್ತು ಬೆಳವಣಿಗೆಗಾಗಿ ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.

ಎಂಎಸ್‌ಎಂಇ ಸಮಾವೇಶದ ಉಪಸಮಿತಿ ಅಧ್ಯಕ್ಷ ಹಾಗೂ ಕೈಗಾರಿಕೋದ್ಯಮಿ ಸದಾಶಿವ ಅಮಿನ್ ಮಾತನಾಡಿ, ಮುಂದಿನ ದಿನಗಳಲ್ಲಿ ಸಣ್ಣ ಕೈಗಾರಿಕೆಗಳ ಸಮಾವೇಶವನ್ನು ಬೆಂಗಳೂರಿನಲ್ಲಿ ಮಾಡದೆ ಹೊರ ಜಿಲ್ಲೆಗಳಲ್ಲಿ ಆಯೋಜಿಸುವಂತೆ ಮುಂದಿನ ಕಾಸಿಯಾ ಅಧ್ಯಕ್ಷರಾಗುವ ನಿಂಗಣ್ಣ ಎಸ್. ಬಿರಾದರ್ ರವರಿಗೆ ಮನವಿ ಮಾಡಿರುವುದಾಗಿ ಹೇಳಿದರು.

ಭವಿಷ್ಯದಲ್ಲಿ ತುಮಕೂರು ಕೈಗಾರಿಕಾ ಹಬ್ ಆಗಿ ಪರಿವರ್ತನೆಯಾಗುತ್ತಿದೆ. ಹಾಗಾಗಿ ತುಮಕೂರಿನಲ್ಲಿ ದಕ್ಷಿಣ ಭಾರತ ಮಟ್ಟದ ಎಂಎಸ್‌ಎಂಇ ಸಮಾವೇಶವನ್ನು ನಡೆಸಿದ್ದೇವೆ. ಈ ಸಮಾವೇಶದ ಅಂಗವಾಗಿ ಸುಮಾರು 150ಕ್ಕೂ ಅಧಿಕ ಮಳಿಗೆಗಳನ್ನು ಹಾಕಲಾಗಿದ್ದು, ಇದರಿಂದ ಮುಂದೆ ಉದ್ಯಮಿಗಳಾಗುವವರಿಗೆ ಮತ್ತು ಸಣ್ಣ ಕೈಗಾರಿಕೆಗಳನ್ನು ಆರಂಭಿಸುವವರಿಗೆ ಬಹಳ ಉಪಯೋಗವಾಗಿದೆ ಎಂದರು.

ಸಮಾರಂಭದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷ ನಿಂಗಣ್ಣ ಎಸ್. ಬೀರಾದರ್, ಪ್ರಧಾನ ಕಾರ್ಯದರ್ಶಿ ಎಸ್.ಎಂ. ಹುಸೇನ್, ನಗರ ಜಂಟಿ ಕಾರ್ಯದರ್ಶಿ ಕೇಶವಮೂರ್ತಿ, ಗ್ರಾಮೀಣ ಜಂಟಿ ಕಾರ್ಯದರ್ಶಿ ದಿನೇಶಕುಮಾರ್.ವಿ., ಖಜಾಂಚಿ ಆರ್.ದೊರೈ, ಉಪಸಮಿತಿ ಅಧ್ಯಕ್ಷ ಸದಾಶಿವ ಆರ್.ಅಮೀನ್, ಸಹ ಅಧ್ಯಕ್ಷ ಆನಂದರಾವ್,ಕೆ, ಉಪಸಮಿತಿಯ ಸಲಹೆಗಾರ ಶ್ರೀಕಂಠದತ್ತ ಪಿ.ಎಸ್., ಕಿರಣ್‌ಕುಮಾರ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular