Thursday, May 21, 2026
Google search engine
Homeಮುಖಪುಟಅಧಿಕಾರ ಜನಸೇವೆ ಮಾಡಲು ಕೊಟ್ಟ ವರ-ಬೀಳ್ಕೊಡುಗೆ ಸಮಾರಂಭದಲ್ಲಿ ನ್ಯಾ.ನೂರುನ್ನೀಸ

ಅಧಿಕಾರ ಜನಸೇವೆ ಮಾಡಲು ಕೊಟ್ಟ ವರ-ಬೀಳ್ಕೊಡುಗೆ ಸಮಾರಂಭದಲ್ಲಿ ನ್ಯಾ.ನೂರುನ್ನೀಸ

ತುಮಕೂರು: ಅಧಿಕಾರ ಎಲ್ಲರಿಗೂ ಸಿಗುವಂತಹುದ್ದಲ್ಲ, ಆದರೆ ಸಿಕ್ಕ ಅಧಿಕಾರವನ್ನು ಸದುಪಯೋಗಪಡಿಸಿ ಕೊಳ್ಳುವುದರ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇದು ನನಗೆ ದೇವರು ಕೊಟ್ಟ ವರ ಎಂದು ಭಾವಿಸಬೇಕು. ಆಗ ಮಾತ್ರ ಅಧಿಕಾರದಲ್ಲಿರುವವರು ಸದಾ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲೆಯಿಂದ ವರ್ಗಾವಣೆಗೊಂಡಿರುವ ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ತಿಳಿಸಿದರು.

ತುಮಕೂರಿನ ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸರಳ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರೇ ಆಗಲಿ ತಮಗೆ ಸಿಕ್ಕ ಅಪರೂಪದ ಅಧಿಕಾರವನ್ನು ಸಮಾಜದ ಒಳಿತಿಗೆ ಬಳಸಿಕೊಳ್ಳಬೇಕು. ಈ ಸಮಾಜಕ್ಕೆ ನನ್ನ ಕೊಡುಗೆ ಏನು ಎಂದು ಚಿಂತಿಸಬೇಕು. ಏಕೆಂದರೆ ಲಕ್ಷಾಂತರ ಜನ ಉದ್ಯೋಗವಿಲ್ಲದೆ, ಅವಕಾಶಗಳಿಲ್ಲದೆ ಇರುವಾಗ ಅವಕಾಶ ವಂಚಿತರ ಬಗ್ಗೆ, ನೊಂದವರ ಬಗ್ಗೆ, ಅನ್ಯಾಯಕ್ಕೆ ಒಳಗಾದವರ ಬಗ್ಗೆ ನಾವು ಸ್ಪಂದಿಸಿದಾಗ ಅವರ ಸಮಸ್ಯೆಗಳೂ ನಿವಾರಣೆಯಾಗುತ್ತವೆ. ಸಮಾಜವೂ ಸುಸ್ಥಿತಿಯಲ್ಲಿರುತ್ತದೆ ಎಂದರು.


ಅಧಿಕಾರದಲ್ಲಿ ಇದ್ದಾಗ ನಮ್ಮ ಕೆಲಸ ಮಾಡಿ ಮುಗಿಸುವುದಷ್ಟೇ ಮುಖ್ಯವಲ್ಲ. ನಾನು ಸರಿಯಾದ ಕೆಲಸ ಮಾಡಿದ್ದೇನೆಯೇ ಎಂದು ಪ್ರತಿದಿನ ರಾತ್ರಿ ಒಮ್ಮೆ ಅವಲೋಕನ ಮಾಡಬೇಕು. ನಮಗೆ ಒಂದು ಸಂವಿಧಾನ ಇದೆ, ಕಾನೂನುಗಳಿವೆ. ಅವುಗಳ ರಕ್ಷಣೆಯಾಗುತ್ತಿದೆಯೇ ಎಂದು ನೋಡಬೇಕು. ಎಲ್ಲರೂ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವ ರೀತಿಯಲ್ಲಿ ನೋಡಿಕೊಳ್ಳಬೇಕು. ಇದರ ಜೊತೆಗೆ ಒಂದಷ್ಟು ಮಾನವೀಯತೆಯೂ ಇರಬೇಕು. ಅಂತಹ ಸ್ವಭಾವ ನನ್ನದಾಗಿತ್ತು. ನಾನು ಅದೇ ಹಾದಿಯಲ್ಲಿ ನಡೆದಿದ್ದೇನೆ ಎಂಬ ತೃಪ್ತಿ ಇದೆ ಎಂದರು.

ಲೇಖಕಿ, ವರದಕ್ಷಿಣೆ ವಿರೋಧಿ ವೇದಿಕೆ ಉಪಾಧ್ಯಕ್ಷೆ ಬಾ.ಹ. ರಮಾಕುಮಾರಿ ಮಾತನಾಡಿ, ಕಾನೂನು ಅರಿವು ಕಾರ್ಯಕ್ರಮಗಳ ಜೊತೆ ಜೊತೆಗೆ ಸಾಮಾಜಿಕ ಸಮಸ್ಯೆಗಳ ಕಡೆಗೆ ಸ್ಪಂದಿಸುವ ಕಾರ್ಯವನ್ನೂ ಪ್ರಾಧಿಕಾರದ ಕಾರ್ಯದರ್ಶಿಗಳಾಗಿ ನಿಭಾಯಿಸಿದ್ದು ಹೆಚ್ಚು ಗಮನ ಸೆಳೆದಿದೆ. ಮಹಿಳೆಯರ ಅನೇಕ ಕಷ್ಟದ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ಮಾರ್ಗದರ್ಶನ ನೀಡಿದ್ದಾರೆ. ವಿವಾಹ ವಿಚ್ಚೇದನದ ಪ್ರಕರಣಗಳಲ್ಲಿ ಅವರಿಗೆ ತಿಳುವಳಿಕೆ ನೀಡಿ ದಂಪತಿಗಳನ್ನು ಒಂದುಗೂಡಿಸಿದ್ದಾರೆ. ಶಾಲೆ ಬಿಟ್ಟು ಹೊರಗುಳಿದ ಮಕ್ಕಳ ಬಗ್ಗೆಯೂ ಗಮನ ಹರಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿ ಮತ್ತು ಅವರ ಕುಟುಂಬದವರ ಜೊತೆ ಮಾತನಾಡಿ ಅವರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ ಎಂದು ಹೇಳಿದರು.

ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಾತನಾಡಿ, ವೇದಿಕೆಯ ಅರಂಭದ ದಿನಗಳಲ್ಲಿ ಮಹಿಳೆಯರ ಸಾವು ನೋವಿನ ವಿರುದ್ದ ಹೋರಾಟ ಮಾಡುತ್ತಿದ್ದ ವೇದಿಕೆ ಬೃಹತ್ ಪ್ರತಿಭಟನೆ ನಡೆಸುತ್ತಿತ್ತು. ಸಮಾವೇಶಗಳನ್ನು ನಡೆಸುತ್ತಿತ್ತು. ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ವಿಚಾರ ಗೋಷ್ಟಿಗಳಿಗೆ ಕರೆಯಿಸಿ ಉಪನ್ಯಾಸ ಕೊಡಿಸಲಾಗುತ್ತಿತ್ತು. ವೇದಿಕೆಯ ಈ ಕಾರ್ಯಚಟುವಟಿಕೆಗಳನ್ನು ಗಮನಿಸಿ ಕಾನೂನು ಸೇವೆಗಳ ಪ್ರಾಧಿಕಾರದ ಅರಿವು ಕಾರ್ಯಕ್ರಮಗಳಿಗೆ ಈ ವೇದಿಕೆಯನ್ನು ಆಯ್ಕೆ ಮಾಡಿಕೊಂಡಿತ್ತು. ಇದರಿಂದಾಗಿ ವರದಕ್ಷಿಣೆ ವಿರೋಧಿ ವೇದಿಕೆಗೂ ಪ್ರಾಧಿಕಾರಕ್ಕೂ ಹೆಚ್ಚು ಸಂಬಂಧ ಬೆಳೆಯಿತು ಎಂದರು.

ಮಿತ್ರ ಫೌಂಡೇಷನ್ ಆಪ್ತ ಸಮಾಲೋಚಕ ಸಿಸಿ ಪಾವಟೆ ಮಾತನಾಡಿದರು. ವೇದಿಕೆ ಪದಾಧಿಕಾರಿಗಳಾದ ಸಿ.ಎಲ್. ಸುನಂದಮ್ಮ, ಬಿ.ಗಂಗಲಕ್ಷ್ಮಿ, ಟಿ.ಆರ್.ಅನಸೂಯ, ಗೀತಾ ನಾಗೇಶ್, ವಿಜ್ನಾನ ಕೇಂದ್ರದ ಅಧ್ಯಕ್ಷೆ ಎನ್. ಅಕ್ಕಮ್ಮ, ರಂಗನಾಥ್, ಸುಮಂತ್, ಸಾಂತ್ವನ ಕೇಂದ್ರದ ಸಮಾಲೋಚಕಿ ಪಾರ್ವತಮ್ಮ, ಮಾಣಿಕ್ಯ ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular