ಮನುಷ್ಯನ ಜೀವನದ ಸತ್ಯವನ್ನು ಅರ್ಥಪೂರ್ಣವಾಗಿ, ಬಹಳ ಸರಳವಾಗಿ ತಿಳಿಸಿದ ಬುದ್ದನ ತತ್ವಗಳು ಸೂರ್ಯ ಚಂದ್ರರು ಇರುವ ತನಕ ಪ್ರಸ್ತುತವಾಗಿರುತ್ತದೆ ಎಂದು ಕರ್ನಾಟಕ ಸರ್ಕಾರದ ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.
ತುಮಕೂರು ನಗರದ ಹೊರವಲಯದ ಸಿದ್ಧಾರ್ಥ ನಗರದಲ್ಲಿ ಆಯೋಜಿಸಲಾಗಿದ್ದ ಬುದ್ಧಪೂರ್ಣಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಗವಾನ್ ಬುದ್ದ ಹುಟ್ಟಿದ, ಬುದ್ದನಿಗೆ ಜ್ಞಾನೋದಯವಾದ ಹಾಗೂ ಬುದ್ದನ ಸಮಾಧಿ ಸ್ಥಿತಿಗೆ ತೆರೆಳಿದ ದಿನ ಇದಾಗಿದ್ದರಿಂದ ಈ ದಿನಕ್ಕೆ ಪ್ರಾಮುಖ್ಯತೆ ಬಂದಿದೆ. ಇಂದು ಜಗತ್ತು ದುಃಖದಲ್ಲಿ ಬಿದ್ದು ನರಳುತ್ತಿದೆ ಈ ದುಃಖದಿಂದ ಹೊರಬರಬೇಕು ಎಂದರೆ ಬುದ್ದನ ಅಷ್ಟಾಂಗಮಾರ್ಗವನ್ನು ಪಾಲಿಸಬೇಕು. ಆಗ ಮಾತ್ರ ಜಗತ್ತು ದುಃಖದಿಂದ ಹೊರಬರಲು ಸಾಧ್ಯ ಎಂದು ಹೇಳಿದರು.
ಬುದ್ದನ ತತ್ವಗಳಲ್ಲಿ ಮನುಷ್ಯ ಮನುಷ್ಯನಿಗೆ ವ್ಯತ್ಯಾಸವಿಲ್ಲ, ಭೌದ್ಧ ಧರ್ಮದಲ್ಲಿ ಜಾತಿ ವ್ಯವಸ್ಥೆಯಿಲ್ಲ, ಬುದ್ಧನ ಎದುರು ಎಲ್ಲರೂ ಸಮಾನರು ಹಾಗಾಗಿ ಬುದ್ದನ ವಿಚಾರಗಳು ಸಾಕಷ್ಟು ಪ್ರಚಾರವಾಗಬೇಕು. ಪ್ರತಿಯೊಬ್ಬರನ್ನೂ ತಲುಪಬೇಕು. ಹಾಗಾಗಿ ಇನ್ನು ಸಾವಿರ ವರ್ಷ ಹೋದರೂ ಕೂಡ ಸಿದ್ಧಾರ್ಥನ ಹೆಸರು ಅಜರಾಮರವಾಗಿ ಜಗತ್ತಿನಲ್ಲಿ ಉಳಿಯುತ್ತದೆ ಎಂದು ತಿಳಿಸಿದರು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ನಂಜುಂಡಪ್ಪ ಮಾತನಾಡಿ, ಬುದ್ದ ವಿಶ್ವದ ಬೆಳಕು. ಶಾಂತಿಮಂತ್ರವನ್ನು ಜಪಿಸಿದ ಮಹಾನ್ ಸಂತ. ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ಸುಧಾರಿಸಲು ಸಾಕಷ್ಟು ಸಮಾಜ ಸುಧಾರಕರು ಬಂದು ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅದರಂತೆ ಬುದ್ದ ಸಮಾಜದಲ್ಲಿನ ತಾರತಮ್ಯವನ್ನು ಹೋಗಲಾಡಿಸಿ ಮನುಷ್ಯ ಮನುಷ್ಯನ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಎಲ್ಲರೂ ಸಮಾನರು ಎಂಬುದನ್ನು ತಿಳಿಸಿಕೊಟ್ಟ. ವ್ಯಕ್ತಿಯು ಶಾಂತಿ, ನೆಮ್ಮದಿಯಿಂದ ಇರಲು ಬೇಕಾದ ಮಾರ್ಗವನ್ನು ಬುದ್ದ ತಮ್ಮ ಅಷ್ಟಾಂಗ ಮಾರ್ಗದಲ್ಲಿ ತಿಳಿಸಿದ್ದಾನೆ. ಇದನ್ನು ನಾವೆಲ್ಲರೂ ಅರ್ಥಮಾಡಿಕೊಂಡು ಈ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಸಂಸ್ಥೆಯ ಮಾರ್ಗದರ್ಶಕ ನರಸಿಂಗಪ್ಪ ಮಾತನಾಡಿ, ಇಂದು ನಾವು ಪಡೆಯುತ್ತಿರುವ ಶಿಕ್ಷಣ ಕೇವಲ ಒಂದು ವೃತ್ತಿಗಾಗಿ ಅಷ್ಟೇ. ನಿಜವಾದ ಶಿಕ್ಷಣ ನಮಗೆ ಇನ್ನು ದೊರೆತೇ ಇಲ್ಲ. ನಿಜವಾದ ಶಿಕ್ಷಣ ಹೇಗಿರಬೇಕು ಅಂದರೆ ಮಾನಸಿಕವಾದ ತೊಂದರೆಗಳನ್ನು ದೂರ ಮಾಡುವಂತಹ ಶಿಕ್ಷಣ ನಮಗೆ ಬೇಕು. ನಾವು ಹೆಚ್ಚು ದುಃಖಿಗಳಾಗಿರುವುದು ನಮ್ಮಲ್ಲಿರುವ ಅತಿಯಾದ ಆಸೆ, ಮೋಹ, ಇವೆಲ್ಲವುಗಳಿಂದ ಮುಕ್ತರಾದರೆ ಸದಾ ಆನಂದವಾಗಿರಬಹುದು. ಬುದ್ದನ ತತ್ವಗಳು ಮನುಷ್ಯನು ಸನ್ನಡತೆಯಿಂದ ಬದುಕುವ ಮಾರ್ಗವನ್ನು ತೋರುತ್ತದೆ. ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಹೇಳಿದರು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಡಾ. ಎಸ್. ಆನಂದ್, ಸಾಹೇ ವಿವಿಯ ಕುಲಸಚಿವ ಡಾ. ಅಶೋಕ್ ಮೆಹ್ತ, ತುಮಕೂರು ಜಿಲ್ಲಾಧಿಕಾರಿ ಶುಭಾಕಲ್ಯಾಣ್, ತುಮಕೂರು ಜಿಲ್ಲಾ ಎಸ್.ಪಿ.ಅಶೋಕ್, ವೈದ್ಯಕೀಯ ಅಧೀಕ್ಷಕ ಡಾ.ವೆಂಕಟೇಶ್, ಎಸ್ಎಸ್ಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಮಹಾಂತೇಶ್ ಎಂ. ನಡಕಟ್ಟಿ ಹಾಜರಿದ್ದರು.


